ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನ, ಬಸದಿಗಳಲ್ಲಿ ಕಳವು: ಏಳು ಮಂದಿ ಸೆರೆ

Last Updated 20 ಜುಲೈ 2013, 10:46 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯ ವಿವಿಧೆಡೆ ದೇವಸ್ಥಾನಗಳು ಮತ್ತು ಬಸದಿಗಳಲ್ಲಿ ವಿಗ್ರಹ ಕಳವು ಮಾಡುತ್ತಿದ್ದ ಏಳು ಮಂದಿ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ಎರದಕೆರೆಯ ತಿಮ್ಮಯ್ಯ (59), ಹಾಸನ ಜಿಲ್ಲೆಯ ಅರಸೀಕೆರೆ ಹಾರ್ನಳ್ಳಿಯ ಸೋಮನಾಥ (45), ಕುವೆಂಪುನಗರದ ಜಯರಾಜ್ ಸ್ವಾಮಿ (45), ಕಟ್ಟಾಯ ಹೋಬಳಿಯ ಕಳ್ಳಹಳ್ಳಿಯ ಗಂಗರಾಜ್ (40), ಶಿವಮೊಗ್ಗ ಜಿಲ್ಲೆ ಮತ್ತೂರು ಗ್ರಾಮದ ಕಡೆಕಲ್ಲು ನಿವಾಸಿ ನೇತ್ರಾವತಿ (38), ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕನ್ಯಾಡಿಯ ಬಾಬು ಯಾನೆ ರಾಜೇಶ (55) ಹಾಗೂ ಶಿವಮೊಗ್ಗದ ರಾಜೇಂದ್ರ (65) ಬಂಧಿತರು.

ಈ ಕುರಿತು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
`ಕೃತ್ಯಕ್ಕೆ ಬಳಸಿದ ಎರಡು ವಾಹನಗಳು, ಏಳು ಮೊಬೈಲ್ ಇನ್ನಿತರ ಸಲಕರಣೆಗಳನ್ನೂ ಆರೋಪಿಗಳಿಂದ ವಶಪಡಿಸಿಕೊಂಡ್ದ್ದಿದೇವೆ.

ಇವುಗಳ ಅಂದಾಜು ಮೌಲ್ಯ 17 ಲಕ್ಷ ರೂಪಾಯಿ. ಬೆಳ್ತಂಗಡಿ ತಾಲ್ಲೂಕಿನ ಬಂಗಾಡಿ ಇಂದಬೆಟ್ಟು ಬಸದಿಯಲ್ಲಿ ಕಳವಾದ ಪಂಚಲೋಹದ ಆರು ವಿಗ್ರಹಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಈ ವಿಗ್ರಹಗಳ ಮೌಲ್ಯವನ್ನು ಪುರಾತತ್ವ ಇಲಾಖೆಯಿಂದ ಮೌಲ್ಯಮಾಪನ ಮಾಡಿಸಬೇಕಿದೆ' ಎಂದರು.

`ತೀರ್ಥಂಕರರ 4 ವಿಗ್ರಹಗಳನ್ನು ಬಾಬುವಿನ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಎರಡು ವಿಗ್ರಹಗಳು ಬಂಗಾಡಿಯ ಬಳಿ ದೊರೆತಿವೆ. ಜಯರಾಜ್ ಸ್ವಾಮಿಯು ಊರಿನ ದೇವಸ್ಥಾನದ ಜೀರ್ಣೋದ್ಧಾರದ ನೆಪ ಹೇಳಿ ಕಳವು ಮಾಡಿದ ಕೆಲವು ಬೆಳ್ಳಿಯ ಆಭರಣಗಳನ್ನು ಶಿವಮೊಗ್ಗದಲ್ಲಿ ಕರಗಿಸಿದ್ದ. ಅವುಗಳನ್ನೂ ಶಿವಮೊಗ್ಗದಲ್ಲಿ ವಶಪಡಿಸಿಕೊಳ್ಳಲಾಗಿದೆ' ಎಂದು ಅವರು ತಿಳಿಸಿದರು.

ಹಗಲು ರಾಜಕಾರಣಿ- ರಾತ್ರಿ ಕಳವು: ಆರೋಪಿಗಳ ಪೈಕಿ ತಿಮ್ಮಯ್ಯ ಕಡೂರಿನ ರಾಜಕೀಯ ಪಕ್ಷವೊಂದರ ಕಾರ್ಯಕರ್ತ. ಆತನ ಪತ್ನಿ ಎರದಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ. ತಿಮ್ಮಯ್ಯ ಹಾಗೂ ಸೋಮನಾಥ ಅವರು ಮಂಡ್ಯದ ಕೆ.ಆರ್.ಪೇಟೆ, ಅರಸೀಕೆರೆ, ಎಚ್.ಎನ್.ಪುರ, ಅರಕಲಗೂಡು, ಗುಬ್ಬಿ ಮೊದಲಾದ ಕಡೆಗಳಲ್ಲೂ ಮನೆ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದರು.

ಕಳವು ಪ್ರಕರಣದಲ್ಲಿ ಬಾಬು ಹಾಗೂ ರಾಜೇಂದ್ರ ಬಂಧನಕ್ಕೊಳಗಾಗಿದ್ದರು. ಇವೆರೆಲ್ಲ ಬೇರೆ ಬೇರೆ ಉರಿನವರಾದರೂ, ಜೈಲಿನಲ್ಲಿದ್ದಾಗ ಪರಸ್ಪರ ಸ್ನೇಹ ಬೆಳೆಸಿಕೊಂಡಿದ್ದಾರೆ' ಎಂದು ಅವರು ವಿವರಿಸಿದರು.

ಕೃತ್ಯಕ್ಕೆ ಅಡ್ಡಿಪಡಿಸುವವರನ್ನು ಕೊಲೆ ಮಾಡುವುದಕ್ಕೂ ಕಳ್ಳರ ತಂಡ ಸಿದ್ಧವಾಗಿರುತ್ತಿತ್ತು. ನಾಕಾಬಂದಿ ಇರುವಲ್ಲಿ ಪೊಲೀಸರ ಕಣ್ಣಿಗೆ ಮಣ್ಣೆರೆಚಲು ಮಹಿಳೆಯನ್ನೂ ಜತೆಗೆ ಕರೆದೊಯ್ಯುತ್ತಿದ್ದರು. ದೇವಸ್ಥಾನದಿಂದ ನಾಲ್ಕೈದು ಕಿ.ಮೀ. ದೂರದಲ್ಲಿ ಕಾರನ್ನು ನಿಲ್ಲಿಸಿ ಕೃತ್ಯ ನಡೆಸಿ ಕದ್ದ ಸ್ವತ್ತುಗಳೊಂದಿಗೆ ಪರಾರಿಯಾಗುತ್ತಿದ್ದರು' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT