ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನ ವಿವಾದ: ಧರಣಿ ಇಂದು

Last Updated 24 ಸೆಪ್ಟೆಂಬರ್ 2011, 8:50 IST
ಅಕ್ಷರ ಗಾತ್ರ

ಬ್ರಹ್ಮಾವರ: ವಾರಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾ ನಗರದಲ್ಲಿ ಪುನರ್ ನಿರ್ಮಾಣವಾಗುತ್ತಿರುವ ದೇವಸ್ಥಾನ ಈಗ ವಿವಾದಕ್ಕೆ ಕಾರಣವಾಗಿದೆ. ದೇವಸ್ಥಾನವನ್ನು ನೆಲಸಮ ಮಾಡಬೇಕೆಂದು 12 ಜನ ನೀಡಿರುವ ಹೇಳಿಕೆಯನ್ನು ವಿರೋಧಿಸಿ, ದೇವಸ್ಥಾನ ನಿರ್ಮಾಣ ಮಾಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಇದೇ 24ರಂದು  ಪ್ರತಿಭಟನೆ ನಡೆಸಲು ಮುಂದಾಗಿವೆ.

ಕುರುಬ ಜನಾಂಗದವರು ಅನಾದಿಕಾಲದಿಂದ ಆರಾಧಿಸಿಕೊಂಡು ಬಂದ ದೇವಸ್ಥಾನದ ಅಭಿವೃದ್ಧಿಗೆ ವಾರಂಬಳ್ಳಿ ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆದು ಪಂಚಾಯಿತಿಯ ಉಪಾಧ್ಯಕ್ಷ ನವೀನ್‌ಚಂದ್ರ ನಾಯಕ್ ಎಂಬವರ ಉಸ್ತುವಾರಿಯಲ್ಲಿ ಇಂದಿರಾನಗರದಲ್ಲಿ ಕಾಮಗಾರಿ ಆರಂಭಿಸಲಾಗಿತ್ತು.

`ದೇವಸ್ಥಾನದ ನಿರ್ಮಾಣಗೊಳ್ಳುತ್ತಿರುವ ಇಂದಿರಾನಗರ ಬಡಾವಣೆಯನ್ನು ಸರ್ಕಾರವು ಬಡಜನರ ವಾಸಕ್ಕಾಗಿ ಕಾಯ್ದಿರಿಸಿದ ಸ್ಥಳವಾಗಿದೆ. ಅಲ್ಲಿ  ಸಾರ್ವಜನಿಕರ ವಿರೋಧದ ನಡುವೆಯೂ ಅಕ್ರಮವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಇದಕ್ಕಾಗಿ ಪಂಚಾಯಿತಿಯ ಹಣ ದುರ್ಬಳಕೆಯಾಗಿದೆ. ಸರ್ಕಾರಿ ಜಾಗದ ಅತಿಕ್ರಮಣವಾಗಿದೆ.
ಎದುರುಗಡೆ ಇರುವ ತೋಡಿನ ಮೇಲೂ ಕಾಂಕ್ರೀಟ್ ಹಾಕಿ ಅದರ ಮೇಲೆ ಕಟ್ಟಡ ನಿರ್ಮಿಸಲಾಗಿದೆ~ ಎಂದು ವಾರಂಬಳ್ಳಿ ಗ್ರಾಮದ ಪ್ರಸಾದ್ ಭಂಡಾರಿ ಮತ್ತು ಸಂಗಡಿಗರು ಆಕ್ಷೇಪ ವ್ಯಕ್ತಪಡಿಸಿದ್ದರು.

`ಸರ್ಕಾರಿ ನಿವೇಶನವಾಗಿರುವ ಈ ಸ್ಥಳದಲ್ಲಿ ಹಿಂದೂ ದೇವಸ್ಥಾನ ನಿರ್ಮಾಣವಾದರೆ, ಕೋಮು ಗಲಭೆಗೆ ಕಾರಣವಾಗಬಲ್ಲುದು~ ಎಂದು ಆತಂಕ ವ್ಯಕ್ತಪಡಿಸಿದ್ದ ಅವರು ಈ ಬಗ್ಗೆ ಸ್ಥಳೀಯ ಪಂಚಾಯಿತಿ, ಶಾಸಕರು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು.

ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ತನಿಖೆ ನಡೆಸುವಂತೆ ತಹಶೀಲ್ದಾರ್‌ಗೆ ಸೂಚಿಸಿದ್ದರು. ಸಾರ್ವಜನಿಕರೇ ಇಲ್ಲಿ ದೇವಸ್ಥಾನ ನಿರ್ಮಿಸಲು ಸಹಮತ ವ್ಯಕ್ತ ಪಡಿಸಿದ್ದರಿಂದ ಪ್ರಕರಣಕ್ಕೆ ತಿರುವು ಪಡೆದಿದೆ.

ಅಕ್ರಮ ನಡೆದಿಲ್ಲ:  `ದೇವಸ್ಥಾನದ ನಿರ್ಮಾಣದಲ್ಲಿ ಅಕ್ರಮ ನಡೆದಿಲ್ಲ. ಕಾಮಗಾರಿ ನಡೆಸಲು ಅನುಮತಿ ಪಡೆಯಲಾಗಿತ್ತು. ಆದರೆ ತೋಡಿನ ಮೇಲೆ ಕಾಂಕ್ರೀಟಿಕರಣ ಮಾಡಿದ್ದು ತಪ್ಪು, ದೇವಸ್ಥಾನವನ್ನು ನಿರ್ಮಿಸಲು 500ಕ್ಕೂ ಹೆಚ್ಚು ಸ್ಥಳೀಯರು ತಮ್ಮ ಸಹಮತ ವ್ಯಕ್ತಪಡಿಸಿದ್ದರು. ಕೇವಲ 12 ಜನರ ವಿರೋಧದ ಅರ್ಜಿ ಈ ಪ್ರತಿಭಟನೆಗೆ ಕಾರಣವಾಗಿದೆ~ ಎಂದು ವಾರಂಬಳ್ಳಿ ಗ್ರಾ.ಪಂ ಅಧ್ಯಕ್ಷ ಎಸ್.ನಾರಾಯಣ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT