ಬೆಂಗಳೂರು: ಜಯನಗರ ನಾಲ್ಕನೇ ಹಂತದಲ್ಲಿ ವಿನಾಯಕ ಸೇವಾ ಸಮಿತಿ ನಿರ್ವಹಿಸುತ್ತಿದ್ದ ವಿನಾಯಕ ದೇವಾಲಯವನ್ನು ಮುಜರಾಯಿ ಇಲಾಖೆಯು ಶನಿವಾರ ವಶಕ್ಕೆ ಪಡೆದಿದೆ.
ಸೇವಾ ಸಮಿತಿ ಸದಸ್ಯರು ದೇವಾಲಯಕ್ಕೆ ಬರುವ ಭಕ್ತರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ಅಲ್ಲದೆ, ದೇವಾಲಯದ ನಿರ್ವಹಣೆಯೂ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಸ್ಥಳೀಯ ಭಕ್ತರು ಮುಜರಾಯಿ ಇಲಾಖೆಗೆ ಕೆಲ ತಿಂಗಳ ಹಿಂದೆ ದೂರು ನೀಡಿದ್ದರು.
ಈ ದೂರಿನ ಆಧಾರದ ಮೇಲೆ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರು ಇತ್ತೀಚೆಗೆ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ದೇವಾಲಯದ ಹಣಕಾಸಿನ ಲೆಕ್ಕಪತ್ರ, ಚಿನ್ನಾಭರಣ ಮತ್ತಿತರ ವಸ್ತುಗಳ ಸಮರ್ಪಕ ನಿರ್ವಹಣೆಯಲ್ಲಿ ಸೇವಾ ಸಮಿತಿ ವಿಫಲವಾಗಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿತ್ತು.
ಸೇವಾ ಸಮಿತಿಯ ಮೇಲಿನ ಆರೋಪಗಳು ಸತ್ಯವಾಗಿದ್ದು, ದೇವಾಲಯವನ್ನು ಮುಜರಾಯಿ ಇಲಾಖೆಯ ವಶಕ್ಕೆ ಪಡೆಯಬೇಕೆಂದು ಸಹಾಯಕ ಆಯುಕ್ತರು ಇಲಾಖೆಯ ಅಧೀನ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸಿದ್ದರು. ಈ ವರದಿಯನ್ನು ಆಧಾರಿಸಿ ಇಲಾಖೆಯ ಅಧೀನ ಕಾರ್ಯದರ್ಶಿಯವರು ಜ.2ರಂದು ಆದೇಶ ಹೊರಡಿಸಿ, ದೇವಾಲಯವನ್ನು ಇಲಾಖೆಯ ವಶಕ್ಕೆ ಪಡೆಯಲು ನಿರ್ದೇಶನ ನೀಡಿದ್ದರು.
ಆ ಆದೇಶದಂತೆ ನಗರ ವಿಶೇಷ ಜಿಲ್ಲಾಧಿಕಾರಿ ಶನಿವಾರ ದೇವಾಲಯವನ್ನು ಸರ್ಕಾರದ ವಶಕ್ಕೆ ಪಡೆದಿದ್ದಾರೆ. ಸರ್ಕಾರದ ಈ ಕ್ರಮಕ್ಕೆ ಸ್ಥಳೀಯ ಭಕ್ತರು ಮುಜರಾಯಿ ಇಲಾಖೆ ಹಾಗೂ ವಿಶೇಷ ಜಿಲ್ಲಾಧಿಕಾರಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.