ಮಲೇಬೆನ್ನೂರು: ದೇವಾಲಯ ನಿರ್ಮಿಸುವುದಕ್ಕಿಂತ ಶಿಕ್ಷಣ ಕೇಂದ್ರ ಸ್ಥಾಪಿಸಬೇಕು ಎಂದು ವಿಶ್ವಕರ್ಮ ಸಮಾಜದ ಅರೆಸಂಸ್ಥಾನ ಮಠದ ಶಿವ ಸುಜ್ಞಾನಮೂರ್ತಿ ಸ್ವಾಮೀಜಿ ಸಲಹೆ ನೀಡಿದರು.
ಮಲೇಬೆನ್ನೂರಿನ ಕಾಳಿಕಾದೇವಿ ದೇವಾಲಯದಲ್ಲಿ ಸೋಮವಾರ ನೂತನ ಕಳಸಾರೋಹಣ ಧರ್ಮಸಭೆ ಉದ್ದೇಶಿಸಿ ಅವರು ಮಾತನಾಡಿದರು.
ದೇವಾಲಯದ ಪಾವಿತ್ರ್ಯತೆ ಕಾಪಾಡಿ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜಕ್ಕೆ ಕೀರ್ತಿ ತನ್ನಿ ಎಂದರು.
ಸರ್ಕಾರ `ವಿಶ್ವಕರ್ಮ ಜಯಂತಿ~ಗೆ ಸರ್ಕಾರಿ ರಜಾ ಘೋಷಿಸಲು ಸರ್ಕಾರದ ಮೇಲೆ ಒತ್ತಡ ತನ್ನಿ. ಎಲ್ಲರೂ ಒಗ್ಗೂಡಿ ಹೋರಾಡಿ ಎಂದು ನವಲಗುಂದದ ಅಜಾತ ನಾಗಲಿಂಗಮಠದ ವೀರಯ್ಯ ಸ್ವಾಮಿ ಸಮಾಜದ ಜನತೆಗೆ ಕೋರಿದರು.
ಆನೆಗುಂದಿ ಸಂಸ್ಥಾನದ ಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ಧರ್ಮ ಕಾರ್ಯ, ಹೋಮ ಹವನ ನಿರಂತರ ನಡೆದಲ್ಲಿ ಧರ್ಮ ಸಂಸ್ಥಾಪನೆ ಹಾಗೂ ಗ್ರಾಮ ಶಾಂತಿ ನೆಲೆಸುತ್ತದೆ ಎಂದು ನುಡಿದರು.
ಬ್ರಾಹ್ಮಿ ಮುಹೂರ್ತದಲ್ಲಿ ನೂತನ ಕಳಸಾರೋಹಣ ನೇರವೇರಿಸಲಾಯಿತು. ಕಾರ್ಯಕ್ರಮದ ನಿಮಿತ್ತವಾಗಿ ಹೋಮ-ಹವನ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು. ಆನಂದ್ ಸ್ವಾಗತಿಸಿದರು, ಶಂಕಾರಾಚಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶಾಚಾರ್ ವಂದಿಸಿದರು.
ರೈತ ಸಂಘ ಘಟಕ ಉದ್ಘಾಟನೆ
ಸಮೀಪದ ಭಾನುವಳ್ಳಿಯಲ್ಲಿ ಈಚೆಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೂತನ ಗ್ರಾಮ ಘಟಕಕ್ಕೆ ಹರಿಹರ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಘಟಕದ ಅಧ್ಯಕ್ಷ ಬೇವಿನಹಳ್ಳಿ ಮಹೇಶ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರೈತರ ಸಮಸ್ಯೆ ಪರಿಹರಿಸಲು ಹಾಗೂ ಬೇಡಿಕೆ ಈಡೇರಿಕೆಗಾಗಿ ಸಂಘಟಿತರಾಗಿ ಹೋರಾಟ ನಡೆಸುವುದೊಂದೇ ಉಳಿದ ಮಾರ್ಗ ಎಂದರು.
ಬೆಳಕೇರಿ ಹನುಮಂತರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಘಟಕದ ಪದಾಧಿಕಾರಿಗಳಿಗೆ `ಶಾಲು ದೀಕ್ಷೆ~ ಪ್ರಮಾಣವಚನ ಬೋಧಿಸಲಾಯಿತು.
ಬಾವಿಮನೆ ಪುಟ್ಟವೀರಪ್ಪ, ಮೆಣಸಿನಹಾಳ್ ರುದ್ರಗೌಡ, ಕಂದಗಲ್ ಹನುಮಂತಪ್ಪ, ಬಾಲಪ್ಪ, ವಿಜಯ್, ಸುರೇಶ್, ದೇವರಾಜ್, ನಾರಾಯಣ ಸ್ವಾಮಿ, ಮಾರುತಿ ಮಲ್ಲಪ್ಪ ರೆಡ್ಡಿ, ಕೆಂಪರಾಜ್ ಇತರರು ಇದ್ದರು.