ಚೆನ್ನೈ (ಐಎಎನ್ ಎಸ್): ತಮ್ಮ ಪೂರ್ವಾಧಿಕಾರಿ ಜಿ. ಮಾಧವನ್ ನಾಯರ್ ಅವರನ್ನು ಸರ್ಕಾರವು ಕಪ್ಪು ಪಟ್ಟಿಗೆ ಸೇರಿಸಲು ಕಾರಣವಾದ ವಿವಾದಾತ್ಮಕ ಅಂತರಿಕ್ಷ್ ದೇವಾಸ್ ವ್ಯವಹಾರಕ್ಕೆ ಸಂಬಂಧಿಸಿದ ಎರಡು ಸಮಿತಿಗಳ ವರದಿಗಳನ್ನು ತಾವು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ಟೋ) ಮುಖ್ಯಸ್ಥ ಕೆ. ರಾಧಾಕೃಷ್ಣನ್ ಅವರು ಮಂಗಳವಾರ ಇಲ್ಲಿ ಸುಳಿವು ನೀಡಿದರು.
ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಚೊಚ್ಚಲ ಪ್ರತಿಕ್ರಿಯೆ ನೀಡಿದ ರಾಧಾಕೃಷ್ಣನ್ ಅವರು ನಾಯರ್ ಅವರು ತಮ್ಮ ಬಗ್ಗೆ ಮಾಡಿದ ಆರೋಪಗಳ ಬಗ್ಗೆ ಪ್ರಸ್ತಾಪಿಸಲಿಲ್ಲ. ತಮ್ಮನ್ನು ಮತ್ತು ಇತರ ಮೂವರು ವಿಜ್ಞಾನಿಗಳನ್ನು ಸರ್ಕಾರಿ ಹುದ್ದೆಗಳಿಂದ ನಿರ್ಬಂಧಿಸಿದ ಸರ್ಕಾರಿ ಕ್ರಮದ ಹಿಂದೆ ರಾಧಾಕೃಷ್ಣನ ಕೈವಾಡ ಇದೆ ಎಂಬುದಾಗಿ ಮಾಧವನ್ ನಾಯರ್ ದೂರಿದ್ದರು.
ತಮ್ಮ ಸಂಕ್ಷಿಪ್ತ ಪತ್ರಿಕಾ ಹೇಳಿಕೆಯಲ್ಲಿ ರಾಧಾಕೃಷ್ಣನ್ ಅವರು ದೇವಾಸ್ ವ್ವವಹಾರಕ್ಕೆ ಸಂಬಂಧಿಸಿದ ಎರಡು ಸಮಿತಿಗಳ ವರದಿಗಳ ಬಿಡುಗಡೆಗೆ ಅಗತ್ಯ ಒಪ್ಪಿಗೆ ಪಡೆಯುವ ಪ್ರಕ್ರಿಯೆಯಲ್ಲಿ ಬಾಹ್ಯಾಕಾಶ ಇಲಾಖೆ ತಲ್ಲೀನವಾಗಿದೆ ಎಂದು ಹೇಳಿದ್ದಾರೆ.