`ದೇವಿ ಮಹಾತ್ಮೆ' ಯಕ್ಷಗಾನವು ಮಂಗಳೂರಿನಲ್ಲಿ ಜನಪ್ರಿಯ. ಹರಕೆ ಹೊತ್ತು, ಜನ ವಿವಿಧ ಯಕ್ಷಗಾನ ಮೇಳಗಳನ್ನು ಸಾಕಷ್ಟು ಮುಂಗಡವೇ ಬುಕ್ ಮಾಡಿ, ಇದನ್ನು ಆಡಿಸುವುದು ವಾಡಿಕೆ. ಮಂದರ್ತಿ, ಕಟೀಲು ಮೊದಲಾದ ಮೇಳಗಳು `ದೇವಿ ಮಹಾತ್ಮೆ'ಯ ಸುಮಾರು ನೂರು ಪ್ರದರ್ಶನಗಳನ್ನು ಮೂರು ತಿಂಗಳ ಅವಧಿಯಲ್ಲೇ ಕೊಡುತ್ತವೆ ಎಂದರೆ ಅದರ ಜನಪ್ರಿಯತೆಯನ್ನು ಅರ್ಥೈಸಿಕೊಳ್ಳಬಹುದು. ಹೊಸನಗರ ಮೇಳವು ಬೆಂಗಳೂರಿನಲ್ಲೂ ಇದೇ `ದೇವಿ ಮಹಾತ್ಮೆ' ಯಕ್ಷಗಾನವನ್ನು ಇತ್ತೀಚೆಗೆ ಪ್ರದರ್ಶಿಸಿತು. ನೃಪತುಂಗ ರಸ್ತೆಯಲ್ಲಿರುವ ಸರ್ಕಾರಿ ಕಲಾ ಕಾಲೇಜು ಮೈದಾನದಲ್ಲಿ ಯಕ್ಷಗಾನದ ಮೈನವಿರೇಳಿಸುವ ಕ್ಷಣಗಳನ್ನು ಅನೇಕರು ತುಂಬಿಕೊಂಡರು. ಈ ಯಕ್ಷಗಾನ ಇಂಥ ಬಯಲಿನಲ್ಲಿ ನಡೆದದ್ದು ಇದೇ ಮೊದಲು. ರಾತ್ರಿಯಿಂದ ಬೆಳಗಿನವರೆಗೆ ಜನಮಾನಸದಲ್ಲಿ ಉಳಿದ ಪಾತ್ರ ಮಹಿಷಾಸುರ. ಶುಂಭ, ನಿಶುಂಭ, ದೇವಿ ಎಲ್ಲಾ ಪಾತ್ರಗಳು ಇದ್ದರೂ ಮಹಿಷಾಸುರನ ಪಾತ್ರ ಕಣ್ಣುತುಂಬಿಕೊಳ್ಳಲೆಂದೇ ಅನೇಕರು ಬಂದಿದ್ದರು. ಜಗದಾಭಿರಾಮ ಪಡುಬಿದ್ರಿ ಹಾಗೂ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರು ಇಬ್ಬರೂ ಮಹಿಷಾಸುರನ ಪಾತ್ರಕ್ಕೆ ಜೀವತುಂಬಿದರು.