ಮೈಸೂರು: ದೇಶಕ್ಕಾಗಿ ಪ್ರಾಣ ಬಿಟ್ಟವರಿಗೆ ಜಮೀನು ಕೊಡಿ ಸಾರ್...-ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಫೋನ್ ಇನ್ ಕಾರ್ಯ ಕ್ರಮದಲ್ಲಿ ಹೀಗೆ ಮನವಿ ಮಾಡಿದವರು ಕೆ.ಆರ್.ನಗರದ ಮಹೇಶ್.
‘ನನ್ನ ಸಹೋದರ ಜಮ್ಮು ಮತ್ತು ಕಾಶ್ಮೀರ ದಲ್ಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟರು. ಸರ್ಕಾರ ಎಂಟು ಎಕರೆ ಜಮೀನು ನೀಡುವಂತೆ ಆದೇಶಿಸಿದೆ. ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿದರೂ ಯವುದೇ ಪ್ರಯೋಜನವಾಗಿಲ್ಲ’ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಹರ್ಷಗುಪ್ತ, ಸರ್ಕಾರ ಆದ್ಯತೆ ಮೇಲೆ ಜಮೀನು ನೀಡುವಂತೆ ಆದೇಶಿಸಿದೆ. ಸದ್ಯಕ್ಕೆ ಮೈಸೂರಿನಲ್ಲಿ ಜಮೀನು ಲಭ್ಯವಿಲ್ಲ. ಇದೊಂದೆ ಪ್ರಕರಣವಲ್ಲ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿ ಲಯ, ಸಂಗೀತ ವಿಶ್ವವಿದ್ಯಾನಿಲಯ, ಯೋಜನಾ ನಿರಾಶ್ರಿತರು ಹಾಗೂ ಸರ್ಕಾರದ ಯೋಜನೆಗಳಿಗೆ ಜಮೀನಿನ ಕೊರತೆ ಇದೆ. ಹಲವು ಮಂದಿ ಜಮೀನು ಕೊಡುವಂತೆ ಮನವಿ ಸಲ್ಲಿಸುತ್ತಿದ್ದಾರೆ. ಸರ್ಕಾರದ ಬೇರೆ ಸೌಲಭ್ಯ ಕೇಳಿ. ಸುಮ್ಮನೆ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ಸುಳ್ಳು ಭರವಸೆ ನೀಡಿ ನಿಮಗೆ ತೊಂದರೆ ಆಗಬಾರದು ಎಂದ ಅವರು ಸೈನಿಕ್ ಬೋರ್ಡ್ ಜತೆ ಮಾತನಾಡುವುದಾಗಿ ತಿಳಿಸಿದರು.
ಪಿರಿಯಾಪಟ್ಟಣ ತಾಲ್ಲೂಕಿನ ಕಂಪ್ಲಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಯಲ್ಲಿ ಕೆಲಸವಾಗದೆ ಬಿಲ್ ಮಾಡಲಾಗಿದೆ ಹಾಗೂ ಫುಟ್ಪಾತ್ ಅಂಗಡಿ ತೆರವು ಮಾಡುವಾಗ ಪಟ್ಟಣ ಪಂಚಾಯಿತಿ ಸದಸ್ಯರ ಸಹೋದರನ ಅಂಗಡಿಯನ್ನು ಮಾತ್ರ ಉಳಿಸಿದ್ದಾರೆ ದೂರು ನೀಡಲಾಯಿತು. ‘ಗ್ರಾಮಕ್ಕೆ ತನಿಖಾ ತಂಡವನ್ನು ಕಳುಹಿಸಲಾಗುವುದು’ ಎಂದು ಸಿಇಓ ಸತ್ಯವತಿ ಹೇಳಿದರೆ, ಪೆಟ್ಟಿಗೆ ತೆರವು ಮಾಡದೆ ಇರು ವುದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವಂತೆ ತಹಶೀಲ್ದಾರ್ ಅವರಿಗೆ ಡಿಸಿ ಸೂಚಿಸಿದರು.
ಎಚ್.ಡಿ.ಕೋಟೆಯಲ್ಲಿ ಖಾಸಗಿ ಟೆಂಪೊಗಳ ಹಾವಳಿ ತಡೆಗಟ್ಟಬೇಕು. 10ರಿಂದ 12 ಜನರನ್ನು ಕರೆದೊಯ್ಯುವ ಸಾಮರ್ಥ್ಯ ಇರುವ ಟೆಂಪೋಗಳು 15ರಿಂದ 20 ಜನರನ್ನು ತುಂಬಿಕೊಂಡು ಹೋಗುತ್ತಿವೆ. ಅಪಘಾತ ಸಂಭವಿಸಿದಾಗ ಮಾತ್ರ ಕೇಸ್ ಹಾಕಲಾಗುತ್ತದೆ. 45 ನಿಮಿಷದಲ್ಲಿ ಎಚ್.ಡಿ.ಕೋಟೆಯಿಂದ ಮೈಸೂರು ತಲುಪುತ್ತಿವೆ ಎಂದು ನಾಗರಿಕರೊಬ್ಬರು ದೂರಿದರು. ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್, ಆರ್ಟಿಓ, ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.
ರಾಘವೇಂದ್ರ ನಗರದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಆಹಾರ ಪದಾರ್ಥಗಳನ್ನು ಸರಿಯಾಗಿ ನೀಡುವುದಿಲ್ಲ. 25ರ ನಂತರ ಪಡಿತರ ಕೊಡಲು ನಾನಾ ಕಾರಣ ಹೇಳುತ್ತಾರೆ. ಗಂಧದ ಕಡ್ಡಿ, ಸೋಪು, ಶ್ಯಾಂಪು ಮಾರಾಟ ಮಾಡುತ್ತಾರೆ. ಇದನ್ನು ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಾರೆ. ನನಗೆ ಯಾರ ಬೆಂಬಲವೂ ಇಲ್ಲ. ಸರದಿ ಸಾಲಿನಲ್ಲಿ ನಿಂತವರಿಗೆ ಸಮಯ ಆಗಿದೆ ಎಂದು ಹೇಳಿ ವಾಪಸ್ ಕಳುಹಿಸುತ್ತಾರೆ ಎಂದು ನಿವಾಸಿಯೊಬ್ಬರು ಅಳಲು ತೋಡಿಕೊಂಡರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಅಧಿಕಾರಿಗೆ ಆದೇಶಿಸಿದರು.
ನಂಜನಗೂಡಿನಲ್ಲಿ ಒತ್ತುವರಿಯಾಗಿದೆ ಎಂದು ದೂರು ನೀಡಿದ ವ್ಯಕ್ತಿಗೆ ಅಲ್ಲಿನ ಕೌನ್ಸಿಲರ್ ಬೆದರಿಕೆ ಹಾಕಿದ್ದಾರೆ ಎಂದು ನಿವಾಸಿಯೊಬ್ಬರು ದೂರಿದರು. ಒಟ್ಟು 24 ದೂರುಗಳು ದಾಖಲಾದವು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಜೆ.ಬೆಟ್ಸೂರ್ಮಠ, ಮೈಸೂರು ಉಪವಿಭಾಗಾಧಿ ಕಾರಿ ಭಾರತಿ, ಮುಡಾ ಕಾರ್ಯದರ್ಶಿ ವಿದ್ಯಾಕುಮಾರಿ, ವಿವಿಧ ತಾಲ್ಲೂಕಿನ ತಹಶೀಲ್ದಾರ್ಗಳು ಹಾಗೂ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಪರ್ಮಿಟ್ ಪರಿಶೀಲಿಸಲು ಡಿಸಿ ಆದೇಶ
ಮೈಸೂರು: ತಿ.ನರಸೀಪುರ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್ಗಳ ರಹದಾರಿಗಳನ್ನು ಪರಿಶೀಲಿಸಿ ವರದಿ ನೀಡಬೇಕು. ರಹದಾರಿ ತೆಗೆದುಕೊಂಡು ಬಸ್ಗಳನ್ನು ಓಡಿಸದೆ ಇದ್ದರೆ ಅಂಥವುಗಳನ್ನು ರದ್ದುಗೊಳಿಸುವಂತೆ ಆರ್ಟಿಓ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಈ ಭಾಗದಲ್ಲಿ ಖಾಸಗಿ ಬಸ್ ಮಾಲೀಕರು ಒಂದು ವಾಹನಕ್ಕೆ 10ರಿಂದ 15 ಪರ್ಮಿಟ್ ತೆಗೆದುಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ಮೈಸೂರು, ತಿ.ನರಸೀಪುರ, ಕೊಳ್ಳೇಗಾಲ ಮಾರ್ಗ ದಲ್ಲಿ ಸಂಚರಿಸುವುದಿಲ್ಲ. ಅಲ್ಲದೇ ತಲಕಾಡಿನ ಮರಳು ಲಾರಿಗಳು ರಾತ್ರಿ 11ರಿಂದ ಬೆಳಗಿನ ಜಾವ 4 ಗಂಟೆವರೆಗೆ ಸಂಚರಿಸುತ್ತವೆ. ಇದರಿಂದ ಧೂಳು ಹೆಚ್ಚು ಬರುತ್ತದೆ ಹಾಗೂ ನಿದ್ದೆ ಬರುವುದಿಲ್ಲ. ಲಾರಿ ಸಂಚಾರ ನಿಷೇಧ ಮಾಡಬೇಕು ಎಂದು ತಿ.ನರಸೀಪುರದ ನಿವಾಸಿ ಶಿವಣ್ಣ ಆಗ್ರಹಿಸಿದರು.
ಇತರೆ ಪಟ್ಟಣಗಳಲ್ಲಿ ನಿಗದಿಪಡಿಸಿರುವಂತೆ ಮರಳು ಲಾರಿ ಸಂಚಾರಕ್ಕೆ ಸಮಯ ನಿಗದಿಪಡಿಸಬೇಕು. ಕೆಲವು ರಸ್ತೆಗಳಲ್ಲಿ ಹೊರತು ಪಡಿಸಿ ಬೇರೆ ರಸ್ತೆಯಲ್ಲಿ ಸಂಚಾರ ಮಾಡದಂತೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.