ಗದಗ: ರೈತರು, ವಾಣಿಜ್ಯೋದ್ಯಮಿಗಳು, ಬುದ್ದಿಜೀವಿ ಗಳು ಕೈ ಜೋಡಿಸಿದಲ್ಲಿ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಆರ್ಟ್ ಆಫ್ ಲಿವಿಂಗ್ನ ರವಿಶಂಕರ ಗುರೂಜಿ ಹೇಳಿದರು.
ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಆವರಣದಲ್ಲಿ ಬುಧವಾರ ಸಂಸ್ಥೆ ವತಿಯಿಂದ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ಸಮಾಜ, ದೇಶದ ಬೆಳವಣಿಗೆಗೆ ವಾಣಿಜ್ಯೋದ್ಯಮಿಗಳು ಹಾಗೂ ವರ್ತಕರ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ಅದನ್ನು ಅರಿತು ಕೆಲಸ ಮಾಡಬೇಕು ಎಂದರಲ್ಲದೆ, ದೇಶದಲ್ಲಿ ಇಂದಿಗೂ ಬ್ರಿಟಿಷರ ಕಾಲದ ಕಾನೂನುಗಳೇ ಮುಂದುವರಿಯುತ್ತಿದ್ದು ಇದರಿಂದ ದೇಶದ ವ್ಯಾಪಾರ ಮತ್ತು ಅಭಿವೃದ್ದಿ ಸಮರ್ಪಕವಾಗಿ ನಡೆಯುತ್ತಿಲ್ಲ’ ಎಂದರು.
‘ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ, ಅವರಿಗೆ ಸೂಕ್ತ ಪ್ರೋತ್ಸಾಹ ದೊರೆಯುತ್ತಿಲ್ಲ. ಇದರಿಂದ ಉನ್ನತಿ ಕುಂಠಿತಗೊಳ್ಳುತ್ತಿದೆ. ಭಾರತೀಯರು ದ್ವೇಷ, ಅಸೂಯೆಯನ್ನು ದೂರವಿಡಬೇಕು. ದೇಶದ ಅಭ್ಯುದಯಕ್ಕಾಗಿ ಪಣ ತೊಟ್ಟು ಸಮಾಜದಲ್ಲಿ ತುಂಬಿರುವ ಅಶಾಂತಿಯನ್ನು ತೊಲಗಿಸಿ ಆಧ್ಯಾತ್ಮಿಕ ತಳಹದಿಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಎಲ್ಲ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ’ ಎಂದು ಹೇಳಿದರು.
ಜಿಲ್ಲೆಯ ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಂಡಲ್ಲಿ ಬದುಕು ಹಸನವಾಗಲಿದೆ ಎಂದರು.ಶಾಸಕ ಶ್ರೀಶೈಲಪ್ಪ ಬಿದರೂರ, ಎಸ್.ಬಿ. ಸಂಕಣ್ಣವರ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಸಂಗಮೇಶ ದಂದೂರ, ಸಂಸ್ಥೆಯ ಸರ್ವ ಸದಸ್ಯರು ಹಾಜರಿದ್ದರು. ನಿರ್ಮಲ ಷಾ ನಿರೂಪಿಸಿದರು. ಬಾಬಣ್ಣ ಶಾಬಾದಿಮಠ ವಂದಿಸಿದರು.