ಯಳಂದೂರು: ಸರ್ಕಾರಗಳು ಅಭಿವೃದ್ಧಿ ಪರ ಮಂತ್ರ ಜಪಿಸಿ, ಸಾಕಷ್ಟು ಅನುದಾನಗಳನ್ನು ಬಿಡುಗಡೆ ಮಾಡುತ್ತಿದ್ದರೂ ನಿಗದಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಪ್ರತಿ ಫಲಾನುಭವಿಗಳೂ ಗಂಭೀರವಾಗಿ ಚಿಂತಿಸಿ ವೈಯುಕ್ತಿಕ ಹಾಗೂ ದೇಶದ ಅಭಿವೃದ್ಧಿಯ ಕಡೆ ಗಮನ ನೀಡಬೇಕಾದ ಅನಿವಾರ್ಯತೆ ಇದೆ~ ಎಂದು ಸಂಸದ ಆರ್. ಧ್ರುವನಾರಾಯಣ್ ತಿಳಿಸಿದರು.
ಪಟ್ಟಣದ ಸಿಡಿಎಸ್ ಸಮುದಾಯ ಭವನದಲ್ಲಿ ಬುಧವಾರ ಪಟ್ಟಣ ಪಂಚಾಯಿತಿ ವತಿಯಿಂದ ಶೇ.22.75 ಅನುದಾನದಡಿಯಲ್ಲಿ ತಾಂತ್ರಿಕ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ಗಳನ್ನು ವಿತರಿಸಿ ಮಾತನಾಡಿದರು.
1977ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಜನಸಂಖ್ಯೆಗೆ ಅನುಗುಣವಾಗಿ ವಿಶೇಷ ಅನುದಾನದ ಯೋಜನೆ ಜಾರಿಗೆ ತಂದರು.
ಇಂದು ರಾಜ್ಯ ಸರ್ಕಾರ ಶೇ. 22.75 ರ ಅನುದಾನದಲ್ಲಿ ಗ್ರಾಮಗಳಲ್ಲಿನ ರಸ್ತೆ, ಚರಂಡಿ ಅಭಿವೃದ್ಧಿ, ನೀರಾವರಿ, ಕೊಳವೆಬಾವಿ ಕೊರೆಯಿಸುವಿಕೆ, ಹಾಗೂ ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಾಯ ಮಾಡುತ್ತಿದೆ. ಇದರ ಲಾಭ ಪಡೆದುಕೊಂಡ ಪ್ರತಿಯೊಬ್ಬರೂ ಆರೋಗ್ಯ, ಶಿಕ್ಷಣಕ್ಕೆ ಒತ್ತು ನೀಡಿ ಮೂಢ ನಂಬಿಕೆಗಳಿಂದ ದೂರವಿದ್ದು, ಆರ್ಥಿಕವಾಗಿ ಪ್ರಗತಿ ಸಾಧಿಸಿ ವಿಶ್ವದಲ್ಲಿ ಭಾರತವನ್ನು ಮುಂಚೂಣಿ ಸ್ಥಾನಕ್ಕೆ ಕೊಂಡೊಯ್ಯುವ ಅನಿವಾರ್ಯತೆ ಇದೆ ಎಂದರು.
ಶಾಸಕ ಜಿ.ಎನ್. ನಂಜುಂಡಸ್ವಾಮಿ ಹಸು ವಿತರಿಸಿ ಮಾತನಾಡಿ, ಪಟ್ಟಣ ಪಂಚಾಯಿತಿಯ ಶೇ 22.75 ರ ಅನುದಾನದಡಿಯಲ್ಲಿ ರೂ. 36 ಲಕ್ಷ ವೆಚ್ಚದಲ್ಲಿ ವಿವಿಧ ತಾಂತ್ರಿಕ ವಿಷಯಗಳ 18 ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಹಾಗೂ ಪಟ್ಟಣದ 80 ಫಲಾನುಭವಿಗಳಿಗೆ ತಲಾ ರೂ.25 ಸಾವಿರ ವೆಚ್ಚದಲ್ಲಿ ಹಸು ವಿತರಿಸಲಾಗುತ್ತಿದೆ. ಈ ಹಣ ಸದುಪಯೋಗ ಆಗಬೇಕಾದರೆ ಕೇವಲ ಲಾಭಕ್ಕಾಗಿ ಇದರ ಬಳಕೆಯಾಗಬಾರದು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ರಂಗಸ್ವಾಮಿ ಮಾತನಾಡಿದರು. ಉಪಾಧ್ಯಕ್ಷೆ ಚಿನ್ನಮ್ಮಮರಯ್ಯ, ಸದಸ್ಯರಾದ ನಾಗರತ್ನಮಹೇಶ್, ಮಲ್ಲಯ್ಯ, ಶ್ರೀನಿವಾಸನಾಯಕ, ಮನೋಹರ್, ನಾಗೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಪಿ. ಶಿವಣ್ಣ, ಮುಖ್ಯಾಧಿಕಾರಿ ವಿಜಯ, ಜೆಇ ಬೆಟ್ಟಸ್ವಾಮಿ, ಗಿರೀಶ್, ಜಯಲಕ್ಷ್ಮಿ, ತಾಲ್ಲೂಕು ಪಶು ಅಧಿಕಾರಿ ಕೆ. ಬಾಲಸುಂದರ್ ಮುಖಂಡರಾದ ಶಾಂತಮೂರ್ತಿ, ನಾಗರಾಜು, ನಂಜುಂಡಸ್ವಾಮಿ, ಜೆ. ಶ್ರೀನಿವಾಸ್, ಮಹದೇವಸ್ವಾಮಿ ಇತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.