ಚಿಕ್ಕಮಗಳೂರು: ದೇಶದ ಭದ್ರತೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಪ್ರಧಾನಿಯಾಗುವುದು ಅತಿ ಮುಖ್ಯ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರನ್ನು ಸಂಸತ್ತಿಗೆ ಕಳುಹಿಸುವ ಮೂಲಕ ಶಕ್ತಿ ತುಂಬಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತದಾರರಲ್ಲಿ ಮನವಿ ಮಾಡಿದರು.
ಮುಗುಳುವಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಚುನಾವಣೆ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ದೇಶದ ಭದ್ರತೆಗಾಗಿ ಕಾಂಗ್ರೆಸ್, ಜೆಡಿಎಸ್ ಮತ್ತು ವಿವಿಧ ಜಾತಿ ಸಮುದಾಯಗಳೆಲ್ಲ ಒಂದಾಗಿ ಬಿಜೆಪಿ ಗೆಲುವಿಗೆ ಸಹಕರಿಸುವಂತೆ ತಿಳಿಸಿದರು.
ರಾಜ್ಯ ಸರ್ಕಾರ ಅಸ್ತಿತ್ವದಲ್ಲಿದೆಯೋ ಇಲ್ಲವೋ ಎಂಬ ಅನುಮಾನ ರಾಜ್ಯದ ಜನತೆ ಕಾಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸಮಸ್ಯೆಗಳು ಹೆಚ್ಚಾಗಿದ್ದು, ರೈತರು ಬೆಳನಷ್ಟದಿಂದ ಸಂಕಷ್ಟದಲ್ಲಿದ್ದು, ರಸ್ತೆಗಳು ಹಾಳಾಗಿವೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಯಾವುದೇ ಸಮಸ್ಯೆಗೂ ಸ್ಪಂದಿಸುತ್ತಿಲ್ಲ ಎಂದರು.
ಶಾಸಕ ಸಿ.ಟಿ.ರವಿ ಮಾತನಾಡಿ, ಕಾಂಗ್ರೆಸ್ ಪಕ್ಷ ದೇಶದ ಗಡಿ ರಕ್ಷಣೆಯಲ್ಲಿ ವಿಫಲವಾಗಿದೆ. ಭಯೋತ್ಪಾದಕರು ಮತ್ತು ನಕ್ಸಲರ ಜೊತೆ ಕೇವಲ ಓಟಿಗಾಗಿ ಕೈಜೋಡಿಸಿರುವ ಪಕ್ಷವನ್ನು ಕಿತ್ತೊಗೆಯಬೇಕು. ಗಡಿ ವಿಷಯದಲ್ಲಿ ರಾಜಿ ಮಾಡಿಕೊಳ್ಳದೆ ದೇಶದ ರಕ್ಷಣೆಗೆ ನರೇಂದ್ರ ಮೋದಿಯವರು ಪ್ರಧಾನಿಯಾಗಲೇಬೇಕೆಂದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿ.ಪಂ. ಸದಸ್ಯರಾದ ನಿರಂಜನ್, ಕಲ್ಮುರಡಪ್ಪ, ರೇಖಾ ಹುಲಿಯಪ್ಪಗೌಡ, ಮುಖಂಡರಾದ ಎಚ್.ಡಿ.ತಮ್ಮಯ್ಯ, ಮಂಜುನಾಥ್, ಅಂಬಳೆ ಶಕ್ತಿ ಕೇಂದ್ರದ ಅಧ್ಯಕ್ಷ ರವಿ, ದೀಪಕ್ ದೊಡ್ಡಯ್ಯ, ದಿನೇಶ್, ಎಂ.ಡಿ.ರವಿ ಹಾಗೂ ಪಕ್ಷದ ಇತರೆ ಕಾರ್ಯಕರ್ತರು ಉಪಸ್ಥಿತರಿದ್ದರು. ಕೆಜೆಪಿ ಮುಖಂಡರಾದ ಸುವರ್ಣ ಕೇಶವಮೂರ್ತಿ, ಭಾನುಮತಿ ಸರಸ್ವತಿ, ಧನಲಕ್ಷ್ಮಿ, ಸರಸ್ವತಿ, ಉಷಾ, ಭಾಗ್ಯಮ್ಮ ಬಿಜೆಪಿ ಸೇರಿದರು.