ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ರಾಜಧಾನಿಯಲ್ಲೇ ಮಹಿಳೆಯರು ಅಸುರಕ್ಷಿತ!

Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ದೆಹಲಿಯಲ್ಲಿ ಕಳೆದ ಡಿಸೆಂಬರ್‌ 16ರಂದು ಪಾ್ಯರಾ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ನಂತರ ಮಹಿಳೆಯರ ಸುರಕ್ಷತೆ ಬಗ್ಗೆ ಪೊಲೀಸರು ಕ್ರಮ ವಹಿಸಿದ್ದರೂ ರಾಜಧಾನಿಯ ಬಹುತೇಕ ಮಹಿಳೆಯರಲ್ಲಿ ಈಗಲೂ ಅಸುರಕ್ಷಿತ ಭಾವನೆ ಇದ್ದೇ ಇದೆ.

ದೆಹಲಿಯಲ್ಲಿ ಮಹಿಳೆ ಸುರಕ್ಷತೆಗಾಗಿ ಪೊಲೀಸರು ಸೇರಿದಂತೆ ಇನ್ನೊಬ್ಬರನ್ನು ಅವಲಂಬಿಸುವುದು ಈಗಲೂ ತಪ್ಪಿಲ್ಲ. ತಮ್ಮದೇ ಆದ ಮಾರ್ಗೋಪಾಯಗಳನ್ನು ಕಂಡುಕೊಂಡರೆ ಮಾತ್ರ ಸುರಕ್ಷಿತವಾಗಿರಬಹುದು ಎಂಬ ಭಾವನೆ ಅನೇಕ ಮಹಿಳೆಯರಲ್ಲಿದೆ. ರಾತ್ರಿ 8ಗಂಟೆಯ ನಂತರ  ಓಡಾಡುವ ಮಹಿಳೆಯರು ರಾಜಧಾನಿಯಲ್ಲಿ ಎಷ್ಟರಮಟ್ಟಿಗೆ ಸುರಕ್ಷಿತ ಎನ್ನುವುದು ಈಗಲೂ ಪ್ರಶ್ನೆಯಾಗಿದೆ.

ಒಂಟಿ ಮಹಿಳೆಯರ ಸುತ್ತ ಅಪರಿಚಿತರು ಸಂಶಯಾತ್ಮಕವಾಗಿ ಸುಳಿದಾಡುತ್ತಿರುತ್ತಾರೆ. ನಿಲ್ದಾಣಗಳಲ್ಲಿ ಬಸ್‌ಗೆ ಕಾಯುವಾಗ ಇಲ್ಲವೇ ರಸ್ತೆ ಬದಿಯಲ್ಲಿ ಸಾಗುವ ಮಹಿಳೆಯರ ಸಮೀಪದಲ್ಲೇ ಕಾರುಗಳು ಹೆದರಿಕೆ ಹುಟ್ಟಿಸುವಂತೆ ಸುಳಿದಾಡುತ್ತವೆ. ಬಹುತೇಕ ರಿಕ್ಷಾ ಚಾಲಕರು ಮಹಿಳೆಯರು ಹೋಗಬೇಕಾದ ಕಡೆಗೆ ಬರುವುದಿಲ್ಲ ಎನ್ನುವ ದೂರುಗಳಿವೆ.

ಅನೇಕ ಮಹಿಳೆಯರು ಬಸ್‌ ನಿಲ್ದಾಣದಲ್ಲಿ ಮತ್ತು ಬಸ್‌ ಒಳಗೆ ಆದ ಕಿರುಕುಳಗಳನ್ನು ಸುದ್ದಿಸಂಸ್ಥೆ ಜೊತೆಗೆ ಹಂಚಿಕೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ರಾಜಧಾನಿಯಲ್ಲಿ ಸಂಚರಿಸುವುದು ದುಃಸ್ವಪ್ನವೇ ಸರಿ ಎಂದಿದ್ದಾರೆ. ‘ಪ್ರತಿದಿನ ಸಂಜೆ 7.30ರ ನಂತರ ಬಸ್‌ನಲ್ಲಿ ಸಂಚರಿಸುವುದು ನನಗೆ ಅನಿವಾರ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಅಷ್ಟು ಹೊತ್ತಿನಲ್ಲಿ ಬಸ್‌ ಸಂಚಾರ ಸೂಕ್ತವೇ ಎಂಬ ಅಸುರಕ್ಷಿತ ಭಾವನೆ  ಕಾಡುತ್ತಿದೆ.

ಮಹಿಳೆಯರ ಸುರಕ್ಷತೆಗೆ ಆಡಳಿತವು ತೆಗೆದುಕೊಂಡಿರುವ ಯಾವ ಕ್ರಮವೂ ನನಗೆ ಗೋಚರಿಸಿಲ್ಲ. ಮಹಿಳೆಯರನ್ನು ಛೇಡಿಸಲು ಪುರುಷರಿಗೆ ಹೆಚ್ಚಿನ ಮಟ್ಟದಲ್ಲೇ ಪರವಾನಗಿ ಇದೆ ಏನೋ?’ ಎಂಬ ಪ್ರಶ್ನೆಯನ್ನು ನೋಯಿಡಾದಲ್ಲಿರುವ ಕಚೇರಿಯಿಂದ ದಕ್ಷಿಣ ದೆಹಲಿಗೆ ನಿತ್ಯ ಪ್ರಯಾಣಿಸುವ ಸಾಫ್ಟವೇರ್‌ ಉದ್ಯೋಗಿ ಸ್ವೇಚ್ಛಾ ಛತ್ರಿ ಮುಂದಿಡುತ್ತಾರೆ.

‘ಡಿಸೆಂಬರ್‌ 16ರ ನಂತರವೂ ದೆಹಲಿಯಲ್ಲಿ ಹಲವು ಅತ್ಯಾಚಾರ ಪ್ರಕರಣಗಳು ಘಟಿಸಿವೆ. ಆದ್ದರಿಂದ ಇಳಿ ಸಂಜೆ ಹೊತ್ತಿನಲ್ಲಿ ಪ್ರಯಾಣಿಸುವ ಮಹಿಳೆಯರಲ್ಲಿ ಭಯ ಸಂಪೂರ್ಣವಾಗಿ  ಹೋಗಿಲ್ಲ. ಇದರಿಂದಾಗಿ ಸಂಜೆ ಸಮಯದಲ್ಲಿ ತಮ್ಮ ಹತ್ತಿರ ಸುಳಿದಾಡುವ ಪ್ರತಿ ಪುರುಷನನ್ನೂ ಆಕೆ ಸಂಶಯದಿಂದಲೇ ನೋಡುತ್ತಾಳೆ’ ಎಂದು ಮಾಧ್ಯಮದಲ್ಲಿ ಉದ್ಯೋಗ ಮಾಡುವ ರಿಷಿತಾ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಕೆಲವು ಮಹಿಳೆಯರು ಇದಕ್ಕೆ ವಿರುದ್ಧವಾದ ಅಭಿಪ್ರಾಯವನ್ನೂ ವ್ಯಕ್ತ­ಪಡಿಸಿ­ದ್ದಾರೆ. ಆಡಳಿತ ಕೆಲವು ಧನಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಈಗೀಗ ಮಹಿಳೆಯರ ವಿಷಯದಲ್ಲಿ ಹೆಚ್ಚು ಜಾಗ್ರತೆ ವಹಿಸಲಾಗುತ್ತಿದೆ.  ಎಂದು ಕೆಲವು ಮಹಿಳೆಯರು ತಿಳಿಸಿದ್ದಾರೆ. ‘ಸಾರ್ವಜನಿಕ ಬಸ್‌ಗಳ ವಿದು್ಯನಾ್ಮಾನ ಫಲಕಗಳಲ್ಲಿ ನಿರಂತರವಾಗಿ ಸಹಾಯವಾಣಿ ಅಥವಾ ನೆರವು ಕೇಂದ್ರಗಳ ದೂರವಾಣಿ ಸಂಖ್ಯೆಗಳು ಬಿತ್ತರವಾಗುತ್ತಿವೆ.

ಅಥವಾ ಎಚ್ಚರಿಕೆ  ವಹಿಸುವಂತೆ ಉದ್ಘೋಷಗಳು ಬಸ್‌ನಲ್ಲಿ ಮತ್ತು ರೇಡಿಯೊದಲ್ಲಿ ಕೇಳಿಬರುತ್ತಿವೆ. ಬಸ್‌ನಲ್ಲಿ ಛೇಡಿಸುವಂತಹ ನೋಟ, ಮೈಗೆ ತಾಗುವಂತೆ ನಿಂತುಕೊಳ್ಳುವ ಪುರುಷರಿಗೆ ಮಹಿಳೆ ಏನಾದರೂ ಸರಿಯಾಗಿ ನಿಂತುಕೊಳ್ಳುವಂತೆ ಎಚ್ಚರಿಕೆ ನೀಡಿದರೆ ಅವರು ಕೂಡಲೇ ಅದನ್ನು ಪಾಲಿಸುತ್ತಾರೆ. ಈ ಮೊದಲು ಪುರುಷರಲ್ಲಿ ಇಂತಹ ಬದಲಾವಣೆ ಇರಲಿಲ್ಲ’ ಎಂಬುದು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮಧುಲಿಕಾ ಸೋನ್‌ಕರ್‌ ಅವರ ಅನಿಸಿಕೆ.

‘ದೆಹಲಿ ಸಾಮೂಹಿಕ ಅತ್ಯಾಚಾರ ಘಟನೆ ನಂತರ ಪೊಲೀಸರೇನೋ ಮಹಿಳೆಯರು ನೀಡುವ ದೂರಿನ ಬಗ್ಗೆ ಶೀಘ್ರ ಸ್ಪಂದಿಸುತ್ತಿದ್ದಾರೆ. ಆದರೆ ಇದರಿಂದ ಮಹಿಳೆಯರ ಮೇಲಿನ ದೌರ್ಜನ್ಯಗಳೇನೂ ಕಡಿಮೆ ಆಗಿಲ್ಲ. ಬದಲಿಗೆ ಹೆಚ್ಚಿವೆ’ ಎಂದು ಗೃಹಿಣಿ ಸಂಗೀತಾ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.

‘ಕರೆದೆಡೆಗೆ ಬಾಡಿಗೆಗೆ ಬಾರದ ರಿಕ್ಷಾ ಚಾಲಕರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಡಿ.16ರ ಘಟನೆಯ ನಂತರ ಮಹಿಳೆಯರು ಪೊಲೀಸರನ್ನು ಮುಕ್ತವಾಗಿ ಸಂಪರ್ಕಿಸುವಂತಹ ವಾತಾವರಣ ಇದೆ. ಸಹಾಯವಾಣಿ ಕೇಂದ್ರಗಳನ್ನು ಪೊಲೀಸ್‌ ಠಾಣೆಗಳಲ್ಲಿ ತೆರೆಯಲಾಗಿದೆ. ಆದರೆ, ಇವುಗಳ ಸಂಖ್ಯೆ ಮತ್ತಷ್ಟು ಹೆಚ್ಚಬೇಕು’ ಎಂಬುದು ಸಾರ್ವಜನಿಕ ಸಂಪರ್ಕ ಕಂಪೆನಿಯ ಉದ್ಯೋಗಿ ದಿವ್ಯಾ ಜೋಷಿ ಅವರ ಒತ್ತಾಯ.

ಜನವರಿಯಿಂದ ಆಗಸ್ಟ್‌ವರೆಗೆ ದೇಶದಲ್ಲಿ 1,036 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಕಳೆದ ಹತ್ತು ವರ್ಷಗಳ ಅಂಕಿ ಅಂಶಕ್ಕೆ ಹೋಲಿಸಿದರೆ ಈ ಎಂಟು ತಿಂಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯೇ ಹೆಚ್ಚಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT