ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಸಮಸ್ಯೆಗೆ ಮೋದಿ ಪರಿಹಾರ: ಡಿವಿಎಸ್‌

Last Updated 26 ಸೆಪ್ಟೆಂಬರ್ 2013, 8:49 IST
ಅಕ್ಷರ ಗಾತ್ರ

ಬೆಳಗಾವಿ: ‘ದೇಶವು ಜ್ವಲಂತ ಸಮಸ್ಯೆ­ಗಳನ್ನು ಎದುರಿಸುತ್ತಿದ್ದು, ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದರೆ ಮಾತ್ರ ಇವುಗಳಿಗೆ ಪರಿಹಾರ ಸಾಧ್ಯ. ಇದ­ಕ್ಕಾಗಿ ಕಾಂಗ್ರೆಸ್ಸೇತರ ಸಮಾನ ಮನಸ್ಕ ಪಕ್ಷಗಳು ಕೈಜೋಡಿಸುವ ಅನಿವಾರ್ಯವಿದೆ’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.

ಬುಧವಾರ ಹುಬ್ಬಳ್ಳಿಗೆ ತೆರಳಲು ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿದ್ದ ಅವರು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತ­ನಾಡಿ, ಕೇವಲ ಪ್ರಧಾನಮಂತ್ರಿಯಾದರೆ ಸಾಲದು, ದೇಶಕ್ಕೆ ಸಮರ್ಥ ನಾಯ­ಕತ್ವದ ಅಗತ್ಯವಿದೆ. ರಿಮೋಟ್‌ ಕಂಟ್ರೋಲ್‌ ಮೂಲಕ ಆಡಳಿತ ನಡೆ­ಸುವ ಪ್ರಧಾನಮಂತ್ರಿಗಳಿಂದ ದೇಶದ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿಲ್ಲ. ಆದ್ದರಿಂದ ದೇಶವನ್ನು ಅಭಿವೃದ್ಧಿಗೆ ಕೊಂಡೊಯ್ಯಬಲ್ಲ ನಾಯಕತ್ವದ ಗುಣವಿರುವ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂದರು.

ದೇಶದ ರಕ್ಷಣೆಯಲ್ಲಿ ಯುಪಿಎ ಸರ್ಕಾರ ವಿಫಲವಾಗಿದ್ದು, ರಾಷ್ಟ್ರವನ್ನು ಜಗತ್ತಿನಲ್ಲಿ ಹರಾಜಿಗಿಟ್ಟಿದೆ. ಇದರಿಂದ ಬೇಸತ್ತಿರುವ ದೇಶದ ಯುವ ಸಮೂಹ ಮೋದಿ ಅವರು ಪ್ರಧಾನಿ ಆಗಬೇಕು ಎಂಬ ಒಲವು ತೋರಿದ್ದಾರೆ. ವಿವಿಧ ಸಮೀಕ್ಷೆಗಳಲ್ಲಿ ಯುವಕರ ಒಲವು ಏನೆಂಬುದು ದೇಶಕ್ಕೆ ಗೊತ್ತಾಗಿದೆ ಎಂದು ಹೇಳಿದರು.

ಕೇಂದ್ರದ ಯುಪಿಎ ಸರ್ಕಾರ ದೇಶದ ಆಂತರಿಕ, ಬಾಹ್ಯ ಭದ್ರತೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ವಿಫಲ­ವಾ­ಗಿದೆ. ಇವೆಲ್ಲವುಗಳು ಮುಂಬರುವ ಲೋಕ­­­­ಸಭೆ ಚುನಾವಣೆಯಲ್ಲಿ ಪ್ರಮುಖ ವಿಷಯಗಳಾಗಲಿವೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿ ಬರಲು ತಮ್ಮ ವೈಯಕ್ತಿಕ ಅಭ್ಯಂತ­ರ­ವೇನಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಯಡಿಯೂರಪ್ಪ ಸೇರ್ಪಡೆ ಕುರಿತು ರಾಷ್ಟ್ರೀಯ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ. ಪಕ್ಷದಿಂದ ಆಯ್ಕೆಯಾದ ಶಾಸಕರು, ಸಂಸದರು ಹಾಗೂ ರಾಜ್ಯ ನಾಯಕರ ಅಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳುವಂತೆ ರಾಷ್ಟ್ರೀಯ ನಾಯಕರಿಗೆ ತಿಳಿಸಲಾಗಿದೆ. ಈ ಕುರಿತು ನರೇಂದ್ರ ಮೋದಿ ಹಾಗೂ ರಾಷ್ಟ್ರ ಅಧ್ಯಕ್ಷರ ಜೊತೆಗೆ ಚರ್ಚಿಸ­ಲಾಗಿದೆ. ಈ ಬಗ್ಗೆ ಬಾಹ್ಯವಾಗಿ ಹಾಗೂ ಮಾಧ್ಯಮದ ಎದುರು ಚರ್ಚಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಯಡಿಯೂರಪ್ಪ ಅವರು ಪಕ್ಷ ಬಿಟ್ಟಿ­ದ್ದ­ರಿಂದ ಮತಗಳ ವಿಭಜನೆ ಆಗಿರು­ವುದು ವಿಧಾನಸಭೆ ಚುನಾವಣೆ­ಯಲ್ಲಿ ಗೊತ್ತಾಗಿದೆ. ವಿಭಜನೆಗೊಂಡ ಮತ­ಗಳನ್ನು ಕ್ರೋಡಿೀಕರಿಸುವ ಅಗತ್ಯ­ವಿದೆ. ಮತಗಳ ವಿಭಜನೆಯಿಂದ ಕಾಂಗ್ರೆಸ್‌ಗೆ ಲಾಭ ಆಗಿದೆ ಎಂದರು.
ರಾಜಕೀಯ ನಿಂತ ನೀರಲ್ಲ. ಬದ­ಲಾದ ಸನ್ನಿವೇಶದಲ್ಲಿ ಬದಲಾವಣೆ ಮಾಡಿ­ಕೊಳ್ಳಬೇಕಾಗುತ್ತದೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರ ವಿರುದ್ಧ ಹಿಂದೆ ವಾಗ್ದಾಳಿ ನಡೆ­ಸಿದ್ದನ್ನು ಸಮರ್ಥಿಸಿಕೊಂಡರು.

ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಅಜಗಜಾಂತರ ವ್ಯತ್ಯಾ­ಸ­­ವಿದೆ. ತಮ್ಮ ಪಕ್ಷದಲ್ಲಿ ಉಂಟಾದ ಆಂತರಿಕ ಕಚ್ಚಾಟ ಮಾಡಿ­ದ್ದಕ್ಕೆ ಕಳೆದ ವಿಧಾನಸಭೆ ಚುನಾವಣೆ­ಯಲ್ಲಿ ಜನರು ಎಚ್ಚರಿಕೆ ನೀಡಿದ್ದಾರೆ. ಇದು ತಾತ್ಕಾಲಿಕವಾಗಿದ್ದು, ಲೋಕಸಭೆ ಚುನಾ­­­­ವಣೆಯಲ್ಲಿ ಮತದಾರರು  ಬೆಂಬಲ ನೀಡಲಿದ್ದಾರೆ ಎಂದರು.

ಲಾಡ್‌ ರಾಜೀನಾಮೆಗೆ ಒತ್ತಾಯ: ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್‌ ಪಕ್ಷಕ್ಕಿಲ್ಲ. ಕೇಂದ್ರದಲ್ಲಿ ಯುಪಿಎ ಸರ್ಕಾರ 6.50 ಲಕ್ಷ ಕೋಟಿ ರೂಪಾಯಿ ಹಗರಣ ಮಾಡಿದೆ ಎಂದ ಅವರು, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿ­ದ್ದಾರೆ ಎಂದು ದಾಖಲೆ ಬಿಡುಗಡೆ ಮಾಡಿ­­ದ್ದರೂ ಸಚಿವ ಸಂತೋಷ್‌ ಲಾಡ್‌ ಅವರ ರಾಜೀನಾಮೆಯನ್ನು ಮುಖ್ಯ­ಮಂತ್ರಿಗಳು ಪಡೆದಿಲ್ಲ. ದಾಖಲೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ಹೇಳು­ತ್ತಿರುವುದು ಸರಿಯಲ್ಲ. ಪಾರ­ದರ್ಶಕ ಆಡಳಿತ ಎಂದು ಜಪಿಸುವ ಮುಖ್ಯ­ಮಂತ್ರಿಗಳು ಕೂಡಲೇ ಸಚಿವ ಲಾಡ್‌ ಅವರ ರಾಜೀನಾಮೆ ಪಡೆ­ಯ­ಬೇಕು ಎಂದು ಒತ್ತಾಯಿಸಿದರು.

ಶಾಸಕ ಸಂಜಯ ಪಾಟೀಲ, ಮಾಜಿ ಶಾಸಕ ಅಭಯ ಪಾಟೀಲ, ಎಂ.ಬಿ. ಜಿರಲಿ, ಉಜ್ವಲಾ ಬಡವಾನಾಚೆ, ಕಿರಣ ಜಾಧವ, ರಾಜು ಚಿಕ್ಕನಗೌಡರ ಮತ್ತಿತರರು ಈ ಸಂದರ್ಭದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT