ಬೆಂಗಳೂರು: `ದೇಶದ ಸಾಂಸ್ಕೃತಿಕ ಪರಂಪರೆಯು ವಿಶ್ವಕ್ಕೆ ಮಾದರಿಯಾದದ್ದು. ಅದನ್ನು ಉಳಿಸುವ ಕೆಲಸವಾಗಬೇಕು' ಎಂದು ಉಪಮುಖ್ಯಮಂತ್ರಿ ಆರ್.ಅಶೋಕ ಹೇಳಿದರು.
ಜ್ಞಾನಕೇಂದ್ರ ಎಜುಕೇಷನ್ ಟ್ರಸ್ಟ್ ಮತ್ತು ನಾಟ್ಯಾಂಜಲಿ ಸಂಸ್ಥೆಯು ಶನಿವಾರ ನಗರದಲ್ಲಿ ಆಯೋಜಿಸಿದ್ದ ಸಮರ್ಪಣಂ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಟಿ.ವಿ.ಕಾರ್ಯಕ್ರಮಗಳಿಂದಾಗಿ ದೇಶದ ಪ್ರಾಚೀನ ಕಲೆಗಳು ನಶಿಸುತ್ತಿವೆ. ದೇಶದ ಪ್ರಾಚೀನ ಕಲೆಗಳಾದ ನೃತ್ಯ, ಸಂಗೀತವನ್ನು ಕುರಿತು ಅಧ್ಯಯನ ನಡೆಸಲು ವಿದೇಶಗಳಿಂದ ಜನರು ಬರುತ್ತಿರುವುದು ದೇಶದ ಹೆಮ್ಮೆ' ಎಂದು ಹೇಳಿದರು. `ಮಹಾಭಾರತ ಮತ್ತು ರಾಮಾಯಣ ಕಥೆಗಳಲ್ಲಿ ಮನೋರಂಜನೆಯ ಜತೆಗೆ ಸಮಾಜಕ್ಕೆ ಸಂದೇಶ ಮತ್ತು ನೀತಿಯು ದೊರೆಯುತ್ತಿತ್ತು. ಇಂದಿನ ಟಿ.ವಿ.ಕಾರ್ಯಕ್ರಮಗಳಲ್ಲಿ ಅಂತಹ ಯಾವುದೇ ನೀತಿ ಸಂದೇಶಗಳು ಸಿಗುತ್ತಿಲ್ಲ' ಎಂದರು. ಕಾರ್ಯಕ್ರಮದಲ್ಲಿ ನೃತ್ಯ ಗುರು ಅಶೋಕ್ ಕುಮಾರ್ ಅವರಿಗೆ `ಕರ್ನಾಟಕ ನಾಟ್ಯ ರತ್ನ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಟಿ ಭಾರತಿ ವಿಷ್ಣುವರ್ದನ್, ಕಿರುತೆರೆ ನಿರ್ದೇಶಕ ರವಿಕಿರಣ್, ಹಿನ್ನೆಲೆ ಗಾಯಕಿ ಸಂಗೀತಾ ಕಟ್ಟಿ, ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಡಾ.ಭಾನು ಪ್ರಕಾಶ್ ಶರ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.