ಶಿವಮೊಗ್ಗ: ಪ್ರತಿಯೊಬ್ಬರೂ ವೈಯಕ್ತಿಕ ಹಿತಾಸಕ್ತಿಗೆ ನೀಡುವ ಪ್ರಾಮುಖ್ಯತೆಯನ್ನು ತಾಯ್ನಾಡಿಗೂ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಇನ್ಫೋಸಿಸ್ನ ಸಂಸ್ಥಾಪಕ ಅಧ್ಯಕ್ಷ ಡಾ.ಎನ್.ಆರ್. ನಾರಾಯಣ ಮೂರ್ತಿ ಅಭಿಪ್ರಾಯ ಪಟ್ಟರು.
ನಗರದ ಜಾವಳ್ಳಿಯ ಜ್ಞಾನದೀಪ ಶಿಕ್ಷಣ ಸಂಸ್ಥೆಯ ಅರಬಿಂದೋ ಪದವಿಪೂರ್ವ ಕಾಲೇಜಿನ ದಶಮಾನೋತ್ಸವ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ದೇಶದ ಹಿತಾಸಕ್ತಿ ಮುಖ್ಯವಾಗಬೇಕು, ಆಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ. ಕಳೆದ 200 ವರ್ಷಗಳಲ್ಲಿ ವಿಶ್ವವೇ ಭಾರತವನ್ನು ಗುರುತಿಸುವ ಪ್ರಕ್ರಿಯೆ ಆರಂಭವಾಗಿದ್ದು, ಕೆಲವೇ ವರ್ಷಗಳಲ್ಲಿ ಈ ದೇಶದ ಸಾಧನೆ ವಿಶ್ವಕ್ಕೆ ಮಾದರಿಯಾಗುತ್ತದೆ ಎಂದರು.
ಜಾಗತೀಕರಣ ನಂತರದ ವರ್ಷಗಳಿಂದ ಭಾರತ ಆರ್ಥಿಕ ಬೆಳವಣಿಗೆಯ ದರ 8.5ರಲ್ಲಿ ಸಾಗುತ್ತಿದೆ. ಹಲವು ವರ್ಷಗಳಿಂದ ಒಂದೇ ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಂಡು ಬರುವುದು ಕೂಡ ಒಂದು ಸಾಧನೆಯೇ. ವಿಶ್ವದ ದೊಡ್ಡಣ್ಣ ಎನ್ನಿಸಿಕೊಂಡ ಅಮೆರಿಕ ಕೂಡಾ ಬೆರಗುಗಣ್ಣಿನಿಂದ ನೋಡುವಂತಾಗಿದೆ ಎಂದರು.
ಜ್ಞಾನದೀಪ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ. ದೇವೇಂದ್ರ, ಪ್ರಾಶುಪಾಲ ಡಾ.ನಾಗರಾಜ್, ಖಜಾಂಚಿ ಡಾ.ಕೆ.ಆರ್. ಶ್ರೀಧರ್, ಸಹಕಾರ್ಯದರ್ಶಿ ನೀಲಕಂಠಮೂರ್ತಿ, ಉಪಾಧ್ಯಕ್ಷ ಟಿ. ಪ್ರಕಾಶ್, ಡಾ.ಪಿ. ನಾರಾಯಣ, ಡಾ.ವೆಂಕಟರಾವ್, ಆಡಳಿತಾಧಿಕಾರಿ ಮಧು ಉಪಸ್ಥಿತರಿದ್ದರು.