ಬೆಂಗಳೂರು: ‘ದೇಶದಲ್ಲಿ ಸದ್ಯದ ರಾಜಕೀಯ ಪರಿಸ್ಥಿತಿ ವಿಷಮವಾಗಿದೆ. ಭ್ರಷ್ಟಾಚಾರ ಹಾಗೂ ಅಪರಾಧ ಹಿನ್ನೆಲೆಯ ಜನರೇ ಜನಪ್ರತಿನಿಧಿಗಳಾಗಿ ಆರಿಸಿ ಬರುತ್ತಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್ ವಿಷಾದಿಸಿದರು.
ವಾಟಾಳ್ ನಾಗರಾಜ್ ಅಭಿಮಾನಿ-ಗಳ ಸಂಘವು ನಗರದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದ ವಾಟಾಳ್ ಅವರನ್ನು ಜನ ಚುನಾವಣೆಯಲ್ಲಿ ಸೋಲಿಸಿದ್ದಾರೆ. ವಾಟಾಳ್ ಇಲ್ಲದ ಶಾಸನಸಭೆಯನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ’ ಎಂದು ಹೇಳಿದರು.
‘ಅವರನ್ನು ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡುವಂತೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೆ. ಈ ವಿಷಯವನ್ನು ಅವರಿಬ್ಬರೂ ಮರೆತಿರುವಂತಿದೆ. ಜನರ ದನಿಯಾಗಿ ವಾಟಾಳ್ ವಿಧಾನಸೌಧದಲ್ಲಿರಬೇಕಾದ್ದು ಅಗತ್ಯ’ ಎಂದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ‘ಅಧಿಕಾರ ಇದ್ದರೂ, ಇರದಿದ್ದರೂ ವಾಟಾಳ್ ನಾಗರಾಜ್ ಹೋರಾಟದಲ್ಲಿ ಮುಂದಿರುತ್ತಾರೆ. ಅವರು ವಿಧಾನಸಭೆಯಲ್ಲಿದ್ದರೆ ಮುತ್ತೈದೆ ಹಣೆಯ ಮೇಲೆ ಕುಂಕುಮವಿದ್ದಂತೆ ವಿಧಾನಸೌಧಕ್ಕೇ ವಿಶೇಷ ಮೆರಗು ಬರುತ್ತಿತ್ತು’ ಎಂದರು.
ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ‘ರಾಜ್ಯದ ನಾಡು, ನುಡಿ, ನೆಲ, ಜಲದ ವಿಚಾರ ಬಂದಾಗಲೆಲ್ಲಾ ವಾಟಾಳ್ ದನಿ ಎತ್ತುತ್ತಲೇ ಬಂದಿದ್ದಾರೆ. ಆದರೂ ಜನ ಅವರನ್ನು ಚುನಾವಣೆಯಲ್ಲಿ ಸೋಲಿಸಿರುವುದು ದುರಂತ. ಮುಂದಿನ ಚುನಾವಣೆಯಲ್ಲಿ ಅವರು ವಿಧಾನಸಭೆಗೆ ಆಯ್ಕೆಯಾಗಲಿ ಎಂಬುದು ನನ್ನ ಹಾರೈಕೆ’ ಎಂದರು.
‘ರೈತರು ಹಳ್ಳಿ ಬಿಡಬಾರದು, ಹಸಿವಿನಿಂದ ಬಳಲಬಾರದು. ಧರ್ಮ, ಜಾತಿಯ ವಿಷ ಬೀಜದ ಮಧ್ಯೆ ಕನ್ನಡತನ ಮರೆಯಾಗುತ್ತಿದೆ. ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗೆ ಬರುವವರೆಗೂ ದೇಶದಲ್ಲಿ ಸಮಾನತೆ ಸಾಧ್ಯವಿಲ್ಲ’ ಎಂದು ಅವರು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಾಟಾಳ್ ನಾಗರಾಜ್, ‘1962ರ ಸೆಪ್ಟೆಂಬರ್ 7ರಂದು ಮೆಜೆಸ್ಟಿಕ್ನ ಅಲಂಕಾರ್ ಚಿತ್ರಮಂದಿರದಲ್ಲಿ ತಮಿಳು ಚಿತ್ರದ ಪ್ರದರ್ಶನದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸ್ ಅಧಿಕಾರಿ ಲೂಯಿಸ್ ಎಂಬಾತ ನನ್ನನ್ನು ಉಪ್ಪಾರಪೇಟೆ ಠಾಣೆಗೆ ಎಳೆದುಕೊಂಡು ಹೋಗಿ ಬೂಟುಗಾಲಿನಿಂದ ಒದ್ದ. ಅಂದಿನಿಂದ ಬೂಟಿನ ಏಟು ಬಿದ್ದ ದಿನವೇ ನನ್ನ ಜನ್ಮದಿನವಾಗಿದೆ’ ಎಂದರು.
‘ನಾಡಿನಲ್ಲಿ ನನ್ನ ಹೋರಾಟಕ್ಕೆ ಅನೇಕರು ಬೆಂಬಲ ನೀಡಿದ್ದಾರೆ. ಎಲ್ಲೇ ಹೋದರೂ ಜನ ನನ್ನನ್ನು ಅಭಿಮಾನದಿಂದ ಕಾಣುತ್ತಾರೆ. ಚುನಾವಣೆಯಲ್ಲಿ ಸೋಲು – ಗೆಲುವು ಸಹಜ. ಆದರೆ, ಜನ ನನ್ನ ಮೇಲಿಟ್ಟಿರುವ ಅಭಿಮಾನಕ್ಕೆ ನಾನು ಋಣಿ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.