ನವದೆಹಲಿ (ಪಿಟಿಐ): ಪ್ರಸಕ್ತ ವರ್ಷದ ಮುಂಗಾರಿನಲ್ಲಿ ದೇಶದ ಮೂರನೇ ಒಂದು ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ಹವಾಮಾನ ಇಲಾಖೆ ತಿಳಿಸಿರುವಂತೆ, ದೇಶದ ಶೇ.53ರಷ್ಟು ಭಾಗಗಳಲ್ಲಿ ಜೂನ್ 1ರಿಂದ ಸೆಪ್ಟೆಂಬರ್ 18ರ ತನಕ ಸಾಮಾನ್ಯ ಮಳೆಯಾಗಿದ್ದು, ಕೆಲವೆಡೆ ಶೇ.28ರಷ್ಟು ಮಳೆಯಾಗಿದ್ದರೂ ಅಭಾವ ಕಾಡಿದೆ. ಸಾಮಾನ್ಯ ಮಳೆ 829 ಮಿ.ಮೀ ಗಿಂತ ಈ ವರ್ಷ 864 ಮಿ.ಮೀ ಮಳೆಯಾಗಿದ್ದು, ಶೇ.4ರಷ್ಟು ಏರಿಕೆ ಕಂಡಿದೆ ಎಂದು ಇಲಾಖೆ ವರದಿ ಮಾಡಿದೆ.
ಜಮ್ಮು-ಕಾಶ್ಮೀರ, ಮಧ್ಯಪ್ರದೇಶದ ಪೂರ್ವ ಮತ್ತು ಪಶ್ಚಿಮ ಭಾಗಗಳು, ಮಹಾರಾಷ್ಟ್ರದ ಉತ್ತರ ಭಾಗ, ಆಂಧ್ರದ ತೆಲಂಗಾಣ ಮತ್ತು ರಾಯಲಸೀಮೆ ಪ್ರದೇಶಗಳು, ಕರ್ನಾಟಕದ ದಕ್ಷಿಣ ಭಾಗ, ಕೇರಳ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಈ ವರ್ಷ ಅತಿ ಹೆಚ್ಚಿನ ಮುಂಗಾರು ಮಳೆಯಾಗಿದೆ.
ಉತ್ತರ ಭಾರತದ ಬಹುತೇಕ ಪ್ರದೇಶಗಳಲ್ಲಿ ಹಾಗೂ ತಮಿಳುನಾಡಿನಲ್ಲಿ ಸಾಮಾನ್ಯ ಮಳೆಯಾಗಿದ್ದು, ದೆಹಲಿ ಹಾಗೂ ಹರಿಯಾಣ ರಾಜ್ಯಗಳು ಮಳೆ ಕೊರತೆ ಎದುರಿಸಿವೆ ಎಂದು ವರದಿ ಮಾಡಿವೆ.
ಬಿಹಾರದಲ್ಲಿ ಮಳೆ ಪ್ರಮಾಣ ಕಡಿಮೆಯಿರುವುದರಿಂದ ಬಿಹಾರ ಸರ್ಕಾರವು ಈಗಾಗಲೇ ರಾಜ್ಯದ 33 ಜಿಲ್ಲೆಗಳನ್ನು ಬರಗಾಲ ಪೀಡಿತ ಜಿಲ್ಲೆಗಳೆಂದು ಘೋಷಿಸಿದೆ.