ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಾಭಿಮಾನಿ...

Last Updated 15 ಜೂನ್ 2011, 19:30 IST
ಅಕ್ಷರ ಗಾತ್ರ

ಇಂದಿನ ಮಕ್ಕಳಲ್ಲಿ ದೇಶ ಪ್ರೇಮ ಬೆಳೆಸುವುದರ ಜತೆಗೆ ಸ್ವಾತಂತ್ರ್ಯಕ್ಕಾಗಿ ಮಡಿದ ಕ್ರಾಂತಿವೀರರ ಆದರ್ಶಗಳನ್ನು ಬಿತ್ತಲು ನಿರಂತರವಾಗಿ ಶ್ರಮಿಸುತ್ತಿದೆ `ರಾಷ್ಟ್ರಗೌರವ ಸಂರಕ್ಷಣಾ ಪರಿಷತ್~.

ಇದೊಂದು ಸ್ವಯಂ ಸೇವಾ ಸಂಸ್ಥೆ. ಮಹಾಲಕ್ಷ್ಮಿ ಬಡಾವಣೆಯ ನಿವಾಸಿ ಟಿ.ಎನ್. ರಾಮಕೃಷ್ಣ ಎಂಬುವವರು ಇದರ ಸ್ಥಾಪಕರು.

ಇವರು  ತುಮಕೂರು ಜಿಲ್ಲೆಯ ತಿಪಟೂರಿನವರು. ತಂದೆ ತಾಯಿ ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರು. ತಂದೆ ಟಿ.ನಾರಾಯಣ ಶಾಸ್ತ್ರಿಗಳು `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ~ ಚಳವಳಿಯಲ್ಲಿ ಭಾಗವಹಿಸಿ ಸೆರೆವಾಸ ಅನುಭವಿಸಿದವರು. ಇಂತಹ ಕೌಟುಂಬಿಕ ವಾತಾವರಣದಲ್ಲಿ ಬೆಳೆದ ಇವರಿಗೂ ತಂದೆಯಂತೆ ದೇಶದ ಬಗ್ಗೆ ಅತೀವ ಕಾಳಜಿ.

ಓದಿದ್ದು ಕಾನೂನು ಪದವಿ. ಆದರೆ ವಕೀಲಿ ವೃತ್ತಿಗಿಂತ ದೇಶಪ್ರೇಮ ಬಿತ್ತುವುದರಲ್ಲೇ ಅತೀವ ಆಸಕ್ತಿ. ಆದ್ದರಿಂದಲೇ ಸ್ವಾತಂತ್ರ್ಯ ಹೋರಾಟಕ್ಕಾಗಿ ಮಡಿದ ಮಹನೀಯರ ಚರಿತ್ರೆಯ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಉಚಿತ ಉಪನ್ಯಾಸ ನೀಡುತ್ತ ಬಂದಿದ್ದಾರೆ.

ಈಗಾಗಲೇ ರಾಜ್ಯದ 250 ಕ್ಕೂ ಹೆಚ್ಚು ಶಾಲಾ ಕಾಲೇಜುಗಳು ಮಾತ್ರವಲ್ಲದೆ ಹೊರ ರಾಜ್ಯಗಳ ಕಾಲೇಜುಗಳಲ್ಲೂ ಉಪನ್ಯಾಸ ನೀಡಿದ್ದಾರೆ.

 ಅಕ್ಷರ ಮಾಲೆ: ಇವರ ವಿಶೇಷ ಎಂದರೆ ಕನ್ನಡ ಮತ್ತು ಆಂಗ್ಲ ಭಾಷೆ ವರ್ಣಮಾಲೆಯ ಕೋಷ್ಟಕ ತಯಾರಿಸಿದ್ದಾರೆ. ಪ್ರತಿಯೊಂದು ವರ್ಣ ಮಾಲೆಯಲ್ಲಿ ಆಯಾ ಅಕ್ಷರದಿಂದ ಆರಂಭವಾಗುವ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಕಲೆ ಹಾಕಿ ದಾಖಲಿಸಿದ್ದಾರೆ.

ಅಲ್ಲದೆ ಕ್ಯಾಲೆಂಡರ್ ಸಹ ಹೊರತಂದಿದ್ದಾರೆ. ಇದರಲ್ಲಿ ನಾಯಕರ ಜನ್ಮ ದಿನ, ಆ ದಿನದ ಮಹತ್ವದ ಮಾಹಿತಿ ನೀಡಿದ್ದಾರೆ. ಇದನ್ನು ಶಾಲೆ, ಕಾಲೇಜು, ನಗರದ ಪ್ರಮುಖ ಗ್ರಂಥಾಲಯಗಳಿಗೆ ಪುಕ್ಕಟೆಯಾಗಿ ವಿತರಿಸಿ ಸಾರ್ವಜನಿಕರಲ್ಲೂ ರಾಷ್ಟ್ರಪ್ರೇಮ ಬೆಳೆಸಲು ಶ್ರಮಿಸುತ್ತಿದ್ದಾರೆ.

ದೇಶಾಭಿಮಾನ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಇವರಿಗೆ ಸ್ಫೂರ್ತಿ ನೀಡಿದ್ದು `ದಿ ಲೆಜೆಂಡ್ ಆಫ್ ಭಗತ್ ಸಿಂಗ್~ ಸಿನಿಮಾ.

ನಿಮ್ಮ ಶಾಲೆ ಕಾಲೇಜುಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಉಚಿತ ಉಪನ್ಯಾಸ ಏರ್ಪಡಿಸಲು 98456 72560 ಸಂಖ್ಯೆಯಲ್ಲಿ ರಾಮಕೃಷ್ಣ ಅವರನ್ನು ಸಂಪರ್ಕಿಸಬಹುದು. ಮಾಹಿತಿಗಾಗಿ www.rgspbharath.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT