ಬೈಲಹೊಂಗಲ: ತಾಯಿಯ ಹಾಲಿನಷ್ಟೇ ಪೌಷ್ಟಿಕ ಅಂಶ ಹೊಂದಿರುವ, ದೇಶೀಯ ಆಕಳು ತಳಿಯನ್ನು ಬೆಳೆಸಲು ರೈತರು ಮುಂದಾಗಬೇಕು ಎಂದು ಕೊಲ್ಲಾಪೂರ ಕನೇರಿ ಅದೃಶ್ಯ ಕಾಡದೇವರ ಸ್ವಾಮೀಜಿ ಕರೆ ನೀಡಿದರು.
ಜೈ ಕರ್ನಾಟಕ ಯುವಕ ಸಂಘ ಹಾಗೂ ಆಧ್ಯಾತ್ಮ ಪ್ರವಚನ ಸೇವಾ ಸಮಿತಿ ಆಶ್ರಯದಲ್ಲಿ ಶೂರ ಸಂಗೊಳ್ಳಿ ರಾಯಣ್ಣ (ಎಂ.ಜೆ.) ಪ್ರೌಢಶಾಲೆ ಮೈದಾನದಲ್ಲಿ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಬರಗಾಲದ ಛಾಯೆ ದೇಶೀಯ ಆಕಳುಗಳ ಮೇಲೆ ದುಷ್ಪರಿಣಾಮ ಬೀರಿದ್ದು, ಲಕ್ಷಗಟ್ಟಲೇ ಖರ್ಚು ಮಾಡಿ ಜರ್ಸಿ ಆಕಳು ಪಾಲನೆ ಮಾಡುವ ಶೋಕಿಗೆ ಒಳಗಾಗಿರುವ ರೈತ ಸಮು ದಾಯ ದೇಶೀಯ ತಳಿ ಕುರಿತು ಮಲತಾಯಿ ಧೋರಣೆ ತಳಿದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಸ್ವಾಮೀಜಿ, ದೇಶೀಯ ಆಕಳು ಹಾಲಿನ ಪ್ರಭಾವದಿಂದ ಬುದ್ಧಿವಂತರು ಹೆಚ್ಚಾಗಿದ್ದು, ಜರ್ಸಿ ಆಕಳು ಹಾಲಿನಿಂದ ಜ್ಞಾನ ಹೆಚ್ಚಾಗುವ ಅಂಶಗಳ ಕೊರತೆ ಸಂಶೋಧನೆಯಿಂದ ಕಂಡು ಬಂದಿದೆ ಎಂದರು.
ಜಿಲ್ಲೆಯಲ್ಲಿ ನಾಗನೂರು ಸಿದ್ದರಾಮ ಸ್ವಾಮೀಜಿ ನೇತೃತ್ವದಲ್ಲಿ ಶ್ರೀಗಳ ನಡಿಗೆ ಕೃಷಿ ಕಡೆಗೆ ಆಂದೋಲನವನ್ನು ಆರಂಭಿಸಲಾಗಿದ್ದು, ಮಠಗಳ ಮೂಲಕ ಜನರಿಗೆ ಸಾವಯವ ಕೃಷಿ ಅಳವಡಿಕೆಗೆ ತಿಳಿವಳಕೆ ನೀಡುವ ಕಾಯಕ ಮುಂದುವರೆಸಲಾಗುವುದು ಎಂದರು.
ಸಾನ್ನಿಧ್ಯವನ್ನು ಬೆಳಗಾವಿ-ನಾಗನೂರು ರುದ್ರಾಕ್ಷಿಮಠ ಸಿದ್ದರಾಮ ಸ್ವಾಮೀಜಿ, ಘೋಡಗೇರಿ ಮಲ್ಲಯ್ಯ ಸ್ವಾಮೀಜಿ ವಹಿಸಿದ್ದರು. ವಿಜಾಪೂರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹಾಗೂ ವಿವಿಧ ಪೂಜ್ಯರು ಉಪಸ್ಥಿತರಿದ್ದರು. ಆನಂದ ಬಡಿಗೇರ ರೈತ ಗೀತೆ ಹಾಡಿದರು. ಈರಣ್ಣ ಜವಳಿ ಸ್ವಾಗತಿಸಿದರು. ಮೃತ್ಯುಂಜಯಸ್ವಾಮಿ ಹಿರೇಮಠ ನಿರೂಪಿಸಿದರು. ವಿಜಯ ಪತ್ತಾರ ವಂದಿಸಿದರು.