ಆಲೂರು: ಯುವಪಡೆ ಜನಪದ ಸಂಸ್ಕೃತಿಯ ಹಿರಿಮೆಯನ್ನು ಮರೆಯುತ್ತ ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿರುವ ಬಗ್ಗೆ ಶಾಸಕ ಎಚ್.ಕೆ. ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಸಾಂಸೃತಿಕ, ಕ್ರೀಡೆ ಹಾಗೂ ಎನ್.ಎಸ್.ಎಸ್. ಘಟಕಗಳ ಉದ್ಘಾಟನೆ ನೆರವೇರಿಸಿ ಮಾತಾಡಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಹೊಳೇನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಸಿ. ಮಲ್ಲೇಶ್ ಮಾತನಾಡಿ, ವಿದ್ಯಾರ್ಥಿಗಳು ಶರಣ ಶ್ರೇಷ್ಠ ಬಸವಣ್ಣ, ಅಲ್ಲಮಪ್ರಭು, ಹರಿದಾಸ, ಶ್ರೇಷ್ಠರಾದ ಪುರಂದರದಾಸರು, ಮತ್ತು ಯುವಶಕ್ತಿ ಚೇತನಪ್ರಾಯರಾದ ಸ್ವಾಮಿ ವಿವೇಕಾನಂದ ಮತ್ತು ಡಿ.ವಿ.ಜಿ. ಅವರ ಉನ್ನತ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾಲೇಜಿನ ವಾರ್ಷಿಕ ಸಂಚಿಕೆ ‘ಸೃಷ್ಟಿ’ ಸಂಪಾದಕ ಪ್ರೊ.ಎಚ್.ಡಿ. ದೇವರಾಜ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಸಿ.ಬಿ.ಚಂದ್ರಪ್ಪ ವಹಿಸಿದ್ದರು. ವಿದ್ಯಾರ್ಥಿಗಳಾದ ರೇಣುಕಾ, ನಂದ, ಪ್ರದೀಪ್, ಚಂದ್ರಶೇಖರ್, ಜಯಶ್ರೀ, ಕುಸುಮ ಸಾಂಸೃತಿಕ ಪ್ರದರ್ಶನ ನೀಡಿದರು.
ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ.ಪಿ.ರತ್ನಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ರೋ.ಡಿ.ಕೆ. ಮಂಜಯ್ಯ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ಮುಖ್ಯಸ್ಥ ಪ್ರೊ.ಎನ್. ಪುಟ್ಟರಾಜು ವಂದಿಸಿದರು.