ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹ ತೊರೆಯಿತು ತಾಳ್ಮೆಯ ಜ್ಯೋತಿ

Last Updated 5 ಫೆಬ್ರುವರಿ 2013, 5:20 IST
ಅಕ್ಷರ ಗಾತ್ರ

ದಾವಣಗೆರೆ: ಹರಿಹರ ಪಂಚಮಸಾಲಿ ಮಠದ ಹಿರಿಯ ಸ್ವಾಮೀಜಿ ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿ ಸಾಕ್ಷಿಯಾದರು.

ನಗರದ ಗಾಂಧಿವೃತ್ತದಲ್ಲಿ ರಾತ್ರಿ 8ರ ವೇಳೆಗೆ ಪಾರ್ಥಿವ ಶರೀರ ಆಗಮಿಸಿದಾಗ ಭಕ್ತರ ಘೋಷಣೆ ಮುಗಿಲುಮುಟ್ಟಿತ್ತು. ಇದೇ ವೇಳೆ ಸಾಕಷ್ಟು ಸಂಚಾರ ವ್ಯತ್ಯಯವೂ ಉಂಟಾಯಿತು. ಅಲಂಕೃತ ವಾಹನದ ಮೇಲೆ ಹೂವಿನ ಮಳೆಗರೆದರು. ಸಮಾಳ ವಾದನ ನಡೆಯಿತು. ಸಂಜೆ 6ರಿಂದಲೇ ಗಾಂಧಿವೃತ್ತದಲ್ಲಿ ಭಕ್ತರು ಜಮಾಯಿಸಿದ್ದರು.

ಇತ್ತ ನಗರದಲ್ಲಿರುವ ಪಂಚಮಸಾಲಿಮಠದಲ್ಲಿಯೂ ಭಾರೀ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಮೆರವಣಿಗೆ ಮಠದಲ್ಲಿ ಅಂತ್ಯಗೊಳ್ಳಲಿದೆ. ಬೆಳಗಿನ ಜಾವ ನಗರದಿಂದ ಹರಿಹರದ ಕಡೆಗೆ ತೆರಳಲಿದೆ.

ಮುಖಂಡರಾದ ಬಿ. ಲೋಕೇಶ್, ತೌಡೂರು ಕೊಟ್ರಗೌಡ ಪಾಟೀಲ್, ಡಿ.ಸಿ. ಶಿವಕುಮಾರ್, ಕೆ.ಎಸ್. ವೀರಣ್ಣ, ಜಿ. ಷಣ್ಮುಖಪ್ಪ, ಎಸ್.ಎನ್. ವೀರಣ್ಣ ಇದ್ದರು.

ಕಂಬನಿ
ಸಿರಿಗೆರೆ (ಚಿತ್ರದುರ್ಗ ಜಿಲ್ಲೆ
):  ವೀರಶೈವ ಪಂಚಮಸಾಲಿ ಪೀಠದ ಸ್ಥಿರ ಪೀಠಾಧ್ಯಕ್ಷ ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರ ನಿಧನ ವಾರ್ತೆಯಿಂದ ನಮಗೆ ಅತೀವ ಆಘಾತವಾಗಿದೆ ಎಂದು ತರಳಬಾಳು ಬೃಹನ್ಮಠದ ಪೀಠಾಧ್ಯಕ್ಷ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ನಾವು ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡುವ ಕಾಲದಿಂದಲೂ ಅವರೊಂದಿಗೆ ನಮ್ಮ ಒಡನಾಟವಿತ್ತು. ಹೊಳಲ್ಕೆರೆ ತರಳಬಾಳು ಹುಣ್ಣಿಮೆ ಮರುದಿನವೇ ಅವರ ಪಟ್ಟಾಭಿಷೇಕ ಸಮಾರಂಭ ಇದ್ದು, ಆ ಸಮಾರಂಭದಲ್ಲಿ ಆತ್ಮೀಯವಾಗಿ ಭಾಗವಹಿಸಿದ್ದನ್ನು ಸ್ಮರಿಸಿಕೊಂಡರು.

ಸಾಣೇಹಳ್ಳಿ ಶ್ರೀ ಸಂತಾಪ:  ನಾಲ್ಕು ವರ್ಷಗಳ ಹಿಂದೆ ನೂತನ ಹರಿಹರ ಪಂಚಮಸಾಲಿ ಪೀಠದ ಪೀಠಾಧಿಪತಿಗಳಾಗಿ ಅಧಿಕಾರ ಸ್ವೀಕರಿಸಿದ್ದ ಡಾ.ಮಹಾಂತ ಸ್ವಾಮೀಜಿ ಮೌನವಾಗಿ, ಸದ್ದಿಲ್ಲದೆ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದರು. ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಹಾಗೆ ಅವರ ವರ್ತನೆ ಇತ್ತು.  ಬೇರೆ ಬೇರೆ ಶಾಖೆಗಳಲ್ಲಿ ಸೇವೆ ಸಲ್ಲಿಸಿದ್ದ ಶ್ರೀಗಳ ಅನುಭವ, ಜ್ಞಾನ, ತಾಳ್ಮೆ, ಪ್ರೀತಿ, ವಿಶ್ವಾಸ ಅನುಕರಣೀಯವಾದುದು. ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರ ನಿಧನಕ್ಕೆ ಹಿರಿಯೂರಿನ ಆದಿಜಾಂಬವ ಮಠದ ಷಡಕ್ಷರ ಮುನಿ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಕಂಬನಿ ಮಿಡಿದ ಸಚಿವರು
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಶ್ರೀಗಳ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಪಂಚಮಸಾಲಿ ಪೀಠಕ್ಕೆ ಶಕ್ತಿ ತುಂಬಿದ್ದ ಶ್ರೀಗಳ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದಿದ್ದಾರೆ.

ಜ್ಞಾನದ ಭಂಡಾರ
ಜ್ಞಾನದ ಭಂಡಾರವೇ ಆಗಿದ್ದ ಪಂಚಮಸಾಲಿ ಪೀಠದ ಮಹಾಂತ ಸ್ವಾಮೀಜಿ ಅವರು ಲಿಂಗೈಕ್ಯರಾದದ್ದು ಇಡೀ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಸಂತಾಪ ಸೂಚಿಸಿದ್ದಾರೆ.

ಒಂದು ಧಾರ್ಮಿಕ ಪೀಠ ಎಷ್ಟು ಸದೃಢವಾಗಿದೆ ಎಂದು ನಿರ್ಧಾರವಾಗುವುದು ಆ ಮಠ ಎಷ್ಟು ಆಸ್ತಿ-ಪಾಸ್ತಿ, ಧನ-ಕನಕಗಳನ್ನು ಹೊಂದಿದೆ ಎಂಬುದರ ಮೇಲಲ್ಲ. ಬದಲಾಗಿ ಆ ಮಠದ ಪೀಠಾಧಿಪತಿ ಎಷ್ಟರಮಟ್ಟಿಗೆ ಪ್ರಖರ ವೈಚಾರಿಕತೆ ಮತ್ತು ವಿದ್ವತ್ತು ಹೊಂದಿದ್ದಾರೆ ಎಂಬುದರ ಮೇಲೆ. ಪ್ರಖರ ವೈಚಾರಿಕತೆ ಮತ್ತು ವಿದ್ವತ್ತು ಎರಡನ್ನೂ ಮೈಗೂಡಿಸಿಕೊಂಡಿದ್ದ ಪಂಚಮಸಾಲಿ ಪೀಠದ ಸ್ಥಿರ ಪೀಠಾಧ್ಯಕ್ಷರಾಗಿ ನೇಮಕವಾದ ಮಹಾಂತ ಸ್ವಾಮೀಜಿ ಎಂದು ಸ್ಮರಿಸಿದ್ದಾರೆ.

ಪ್ರಯಾಗ ವಿಶ್ವವಿದ್ಯಾಲಯದಿಂದ ಸಾಹಿತ್ಯ ವಿಶಾರದ ಪದವಿ, ವಾರಣಾಸಿ ಸಂಸ್ಕೃತ ವಿಶ್ವವಿದ್ಯಾಲಯದಿಂದ ಅದ್ವೈತ ವೇದಾಂತ ವಿಷಯದಲ್ಲಿ ಆಚಾರ್ಯ ಪದವಿ, ಬನಾರಸ್ ಹಿಂದಿ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ. ಹಾಗೂ ಡಿ.ಲಿಟ್ ಹೀಗೆ... ಅಪಾರ ಜ್ಞಾನಸಂಪತ್ತನ್ನು ಶ್ರೀಗಳು ಹೊಂದಿದ್ದರು. ಹರಿಹರದ ಬಳಿ ಶ್ರೀಮಠದ ನಿರ್ಮಾಣ ಕಾರ್ಯ ಸಮರೋಪಾದಿಯಲ್ಲಿ ನಡೆಯಲು ಕಾರಣವಾಗಿದ್ದೇ ಭಕ್ತರು ನೀಡುವ ಗುಣ ಮೈಗೂಡಿಸಿಕೊಂಡಿದ್ದರ ಫಲವಾಗಿ. ಇಂತಹ ಶ್ರೀಗಳು ಲಿಂಗೈಕ್ಯರಾಗಿರುವುದು ಭಕ್ತರಿಗೆ ಅಪಾರ ನೋವು ಉಂಟು ಮಾಡಿದೆ. ಅಲ್ಲದೇ, ಸಂಘಟನೆ ವಿಚಾರದಲ್ಲಿ  ನಾಗಾಲೋಟದಲ್ಲಿ ಸಾಗುತ್ತಿದ್ದ ಸಮಾಜಕ್ಕೆ ಆಘಾತ ಎದುರಾಗಿದೆ ಎಂದು ಹೇಳಿದ್ದಾರೆ.

ಅಘಾತ ತಂದಿದೆ 
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಸ್ಥಿರ ಪೀಠಾಧಿಪತಿ ಮಹಾಂತ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾಗಿರುವುದು ನಮ್ಮೆಲ್ಲರಿಗೂ ಆಘಾತ ತರಿಸಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಸಂತಾಪ ಸೂಚಿಸಿದ್ದಾರೆ.

ಶ್ರೀಗಳು, ಬಸವತತ್ವ ಪ್ರಚಾರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದರು. ಸಮಾಜದ ಸಂಘಟನೆಗೆ ಅವರ ಕೊಡುಗೆ ಅಪಾರ. ಅವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಮನೂರು ಸಂತಾಪ
ಮಹಾಂತ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾಗಿರುವುದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಅಬ್ದುಲ್ ಜಬ್ಬಾರ್, ಕೆಪಿಸಿಸಿ ಸದಸ್ಯ ಡಿ. ಬಸವರಾಜ, ನಗರಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀಗಳ ಅಗಲಿಕೆಯಿಂದ ಲಕ್ಷಾಂತರ ಭಕ್ತರು ಮತ್ತು ಸಮಾಜ ಅನಾಥವಾಗಿದೆ. ಜನಸೇವೆಗೆ ಜೀವನ ಮುಡುಪಾಗಿಟ್ಟ ಶ್ರೀಗಳಿಗೆ, ಅಲ್ಪ ಅವಧಿಯಲ್ಲಿ ಮಠವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋದ ಕೀರ್ತಿ ಸಲ್ಲುತ್ತದೆ ಎಂದಿದ್ದಾರೆ.

ಸಂತಾಪ
ಕೋಆಪರೇಟಿವ್ ಬ್ಯಾಂಕ್
:  ಹರಿಹರ ಅರ್ಬನ್ ಕೋಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಎನ್.ಎಂ.ಜೆ.ಬಿ. ಆರಾಧ್ಯ, ಪ್ರಧಾನ ವ್ಯವಸ್ಥಾಪಕ ಬಸವರಾಜ್, ಸದಸ್ಯರಾದ ಕಿರುವಾಡಿ ಸೋಮಶೇಖರ್, ಎಸ್.ಕೆ. ವೀರಣ್ಣ, ಮುರುಗೇಶ್ ಆರಾಧ್ಯ, ಕೆ.ಎಂ. ಫಾಲಾಕ್ಷಪ್ಪ, ಕರೇಶಿವಪ್ಳ ಸಿದ್ದೇಶ್, ಅಂಗಡಿ ವಿಶ್ವನಾಥ್ ಸಂತಾಪ ಸೂಚಿಸಿದ್ದಾರೆ.

ಕೆಜೆಪಿ: ಸ್ವಾಮೀಜಿ ಲಿಂಗೈಕ್ಯರಾಗಿರುವುದಕ್ಕೆ ಕರ್ನಾಟಕ ಜನತಾ ಪಕ್ಷದ ವತಿಯಿಂದ ಸಭೆ ನಡೆಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪಕ್ಷದ ಜಿಲ್ಲಾ ಸಂಚಾಲಕ ಬಿ.ಎಸ್. ಜಗದೀಶ್, ಮುಖಂಡರಾದ ಬಿ.ಎಂ. ಷಣ್ಮುಖಯ್ಯ, ಕೆ. ಹೇಮಂತಕುಮಾರ್, ಸಂಚಾಲಕರಾದ ನಿಟುವಳ್ಳಿ ಬಸವರಾಜ್, ಮಟ್ಟಿಕಲ್ ವೀರಭದ್ರಸ್ವಾಮಿ, ಸುರೇಂದ್ರಪ್ಪ, ಮಾಧ್ಯಮ ಪ್ರಮುಖ ರೇಣುಕಸ್ವಾಮಿ ಹಾಗೂ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಏಕೀಕರಣ ಪರಿಷತ್: ಸೋಮವಾರ ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್ ಕೇಂದ್ರ ಸಮಿತಿ ಮತ್ತು ಮಹಿಳಾ ಸಂಘದ ವತಿಯಿಂದ ಎವಿಕೆ ಕಾಲೇಜು ರಸ್ತೆಯ ನಿರಂಜನ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಸಭೆ ನಡೆಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪರಿಷತ್‌ನ ಅಧ್ಯಕ್ಷ ರೇವಣ್ಣ ಬಳ್ಳಾರಿ, ಗೌರವಾಧ್ಯಕ್ಷ ಕಂದನಕೋವಿ ರುದ್ರಪ್ಪ, ಸಂಸ್ಥಾಪಕ ಅಧ್ಯಕ್ಷ ಉಮೇಶ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಎಚ್.ವಿ. ಪ್ರಭುಲಿಂಗಪ್ಪ, ಸಲಹಾ ಸಮಿತಿಯ ಅಧ್ಯಕ್ಷ ಮಾಕನೂರು ಮಲ್ಲಿಕಾರ್ಜುನಪ್ಪ, ಖಜಾಂಚಿ ಬಸವರಾಜ್ ಸಿರಿಗೆರೆ, ಸಹ ಕಾರ್ಯದರ್ಶಿ ಟಿ.ಎಂ. ಮುರುಗೇಶ್, ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಣಮ್ಮ, ಮಾದೇವಮ್ಮ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಪ್ರಕಟಣೆ ತಿಳಿಸಿದೆ.

ನೂತನ ಮಹಾವಿದ್ಯಾಲಯ: ನೂತನ ಶಿಕ್ಷಣ ಮಹಾವಿದ್ಯಾಲಯ ಸಂತಾಪ ಸೂಚಿಸಿದೆ.
ವಿದ್ಯಾಸಂಸ್ಥೆಯ ಅಧ್ಯಕ್ಷ ಮುದೇಗೌಡ್ರ ವೀರಭದ್ರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂತಾಪ ಸಭೆಯಲ್ಲಿ, ಮೂರು ನಿಮಿಷಗಳ ಕಾಲ ಮೌನಾಚರಿಸಲಾಯಿತು.

ಸಂಸ್ಥೆಯ ಖಜಾಂಚಿ ಎಲ್.ವಿ. ಸುಬ್ರಹ್ಮಣ್ಯ, ನಿರ್ದೇಶಕರು, ಪ್ರಾಂಶುಪಾಲ ಡಾ.ಎಚ್.ವಿ. ಶಿವಶಂಕರ, ಬೋಧಕ-ಬೋಧಕೇತರ ವರ್ಗದವರು ಹಾಗೂ ಪ್ರಶಿಕ್ಷಣಾರ್ಥಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದೆ.
ವೀರಶೈವ ಯುವಘಟಕ: ಅಖಿಲಭಾರತ ವೀರಶೈವ ಮಹಾಸಭಾದ ದಾವಣಗೆರೆ ಜಿಲ್ಲಾ ಯುವಘಟಕ ತೀವ್ರ ಸಂತಾಪ ಸೂಚಿಸಿದೆ.

ಜಿಲ್ಲಾ ಯುವಘಟಕದ ಅಧ್ಯಕ್ಷರಾದ ಬಸವರಾಜು ವಿ. ಶಿವಗಂಗಾ ಅವರು ಮಾತನಾಡಿ, ಲಿಂಗೈಕ್ಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು. ಶ್ರೀಗಳ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಜಿಲ್ಲಾ ಯುವಘಟಕದ ಪ್ರಧಾನ ಕಾರ್ಯದರ್ಶಿ ಆರ್.ಟಿ. ಪ್ರಶಾಂತ್, ಸಿ.ಎಂ. ರವಿಕುಮಾರ್, ರಾಘವೇಂದ್ರಗೌಡ, ಹುಲಿಕಟ್ಟಿರಾಜು, ಶಿವನಗೌಡ ಪಾಟೀಲ್, ಡೋಲಿ ಚಂದ್ರು ಉಪಸ್ಥಿತರಿದ್ದರು ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಸಮರಸೇನೆ: ದಾವಣಗೆರೆಯ ಕರ್ನಾಟಕ ಸಮರ ಸೇನೆ ಎರಡು ನಿಮಿಷಗಳ ಮೌನಾಚರಣೆ ನಡೆಸಿ, ಸಂತಾಪ ವ್ಯಕ್ತಪಡಿಸಿದೆ.

ರಾಜ್ಯ ಘಟಕ ಅಧ್ಯಕ್ಷ ಟಾರ್ಗೆಟ್ ಅಸ್ಲಾಂ, ರಾಜ್ಯ ಉಪಾಧ್ಯಕ್ಷ ಎಚ್. ಸುಧಾಕರ್, ಐ.ಜಿ. ಭೀಮಣ್ಣ, ಸೈಯದ್ ರಹಮತ್‌ಉಲ್ಲಾ, ಭಾಗ್ಯದೇವಿ, ಡಾ.ಅಮಾನುಲ್ಲಾ, ಯೋಗೀಶ್, ನೇತ್ರಾವತಿ, ಗಣೇಶ್, ಬಿ. ರೇವಣಸಿದ್ದಪ್ಪ, ಚಂದ್ರಶೇಖರ ಪೂಜಾರ್, ಬಾಬುಲಾಲ್, ಕೃಷ್ಣ ಸಾ ಬೂತೆ, ದುರುಗೇಶ್, ವೀರೇಂದ್ರ, ಜಮೀಲಾಬಿ, ಮಂಜುನಾಥ ವಾಟರ್ ಪಾಯಿಂಟ್, ಎನ್. ಗಿರೀಶ, ದಾದಾಪೀರ್, ಮೋಹನ್, ನಾಗರಾಜ ಹಲವಾಗಲು, ಸುನಿತಾ, ಜಿ.ಪಿ. ಪ್ರಕಾಶ್, ಜಬಿ, ಉಮಾ ಉಪಸ್ಥಿತರಿದ್ದರು.
 

ಇಂದು ಶಾಲಾ- ಕಾಲೇಜುಗಳಿಗೆ ರಜೆ
ದಾವಣಗೆರೆ:
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಸ್ಥಿರ ಪೀಠಾಧಿಪತಿ ಮಹಾಂತ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾಗಿದ್ದು, ಅಂತ್ಯಕ್ರಿಯೆ ಹರಿಹರ ತಾಲ್ಲೂಕು ಹನಗವಾಡಿ ಗ್ರಾಮದಲ್ಲಿರುವ ಶ್ರೀಮಠದ ಆವರಣದಲ್ಲಿ ಫೆ. 5ರಂದು ಮಧ್ಯಾಹ್ನ 1ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.

ಈ ಹಿನ್ನೆಲೆಯಲ್ಲಿ, ಶ್ರೀಗಳ ಗೌರವಾರ್ಥ ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಬದಲಿಗೆ, ಫೆ. 9ರಂದು ಎಲ್ಲ ಶಾಲಾ-ಕಾಲೇಜುಗಳನ್ನು ಪೂರ್ಣದಿನ ನಡೆಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT