ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹ ಮೀಮಾಂಸೆಯ ರಾಶಿಫಲ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

`ಈ ಸಿನಿಮಾದಲ್ಲಿ ನಾಯಕನಿಗೆ ನಿಜಕ್ಕೂ `ಏಯ್ಟಪ್ಯಾಕ್~ ಅಗತ್ಯವಿದೆಯೇ ಅಥವಾ ಖಯಾಲಿಗಾಗಿ ಈ ಕಸರತ್ತು ಮಾಡಲಾಗಿದೆಯೇ?~- ಪ್ರಶ್ನೆಗೆ ಸೂಕ್ತ ಉತ್ತರ ಚಿತ್ರತಂಡದಿಂದ ಹೊರಬರಲಿಲ್ಲ. ನಾಯಕ ತನ್ನ ದೇಹದಂಡನೆಯ ಕುರುಹನ್ನು ಪ್ರದರ್ಶಿಸುವ ಸನ್ನಿವೇಶವಂತೂ ಇದೆ ಎಂಬ ಹಾರಿಕೆ ಉತ್ತರ ಬಂತು.

ಚಿತ್ರೀಕರಣ ಬಹುತೇಕ ಪೂರ್ಣಗೊಳಿಸಿದ್ದ `ಕುಂಭರಾಶಿ~ ಚಿತ್ರತಂಡ ಸುದ್ದಿಮಿತ್ರರ ಎದುರಾಯಿತು. ಸುದ್ದಿಗೋಷ್ಠಿಯುದ್ದಕ್ಕೂ ನಾಯಕ ಚೇತನ್‌ಚಂದ್ರ ತಮ್ಮ ಏಯ್ಟಪ್ಯಾಕ್ ತಯಾರಿ ಮತ್ತು ಅದರ ನಿರ್ವಹಣೆ ಕುರಿತೇ ಹೆಚ್ಚು ಮಾತನಾಡಿದರು. ಚಿತ್ರದ ಎಳೆ ತೆರೆದಿಡಲು ಅಲ್ಲಿ ನೆರೆದಿದ್ದವರಾರೂ ಸಿದ್ಧರಿರಲಿಲ್ಲ. ತೆರೆಯ ಮೇಲೆಯೇ ಅದನ್ನು ನೋಡಿ ತಿಳಿಯಲಿ ಎನ್ನುವುದು ಅವರ ಉದ್ದೇಶ.

ಗುರುರಾಜ ಹೊಸಕೋಟೆ ಸ್ಮಶಾನ ಕಾಯುವವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮಗನಾಗಿ ಚೇತನ್‌ಚಂದ್ರ ಚಿಂದಿ ಆಯುವ ಯುವಕನಾಗಿ ನಟಿಸಿದ್ದಾರೆ.
ಮಾತಿನ ಭಾಗ ಹಾಗೂ ಮೂರು ಹಾಡುಗಳ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಎರಡು ಹಾಡುಗಳನ್ನು ಮಾತ್ರ ಉಳಿಸಿಕೊಂಡಿದೆ.

ಬೀದರ್‌ನಲ್ಲಿ ಅದನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಿದೆ. ಹಾಡು ಹಾಗೂ ಮಾತಿನ ಸನ್ನಿವೇಶಗಳಿಗೆ ಬೇರೆ ಬೇರೆ ಕ್ಯಾಮೆರಾಗಳನ್ನು ಬಳಸಿರುವುದನ್ನು ನಿರ್ದೇಶಕ ಚಂದ್ರಹಾಸ ಹೇಳಿಕೊಂಡರು.

ಒಂದೇ ಬಗೆಯ ಪಾತ್ರಗಳನ್ನು ಮಾಡಿ ಬೇಸರವಾದಾಗ ಸವಾಲಿನದು ಎನಿಸುವ ಹೊಸಬಗೆಯ ಪಾತ್ರ ಸಿಕ್ಕಾಗ ಕಲಾವಿದನಿಗೆ ಹುಮ್ಮಸ್ಸು ಬರುತ್ತದೆ. ಅಂತಹ ವಿಭಿನ್ನ ಪಾತ್ರ ತಮಗೆ ಸಿಕ್ಕಿದೆ ಎಂಬ ನೆಮ್ಮದಿ ಗುರುರಾಜ ಹೊಸಕೋಟೆ ಅವರದ್ದು.

ಸಂಕಲನಕಾರ ನಾಗೇಂದ್ರ ಅರಸ್ ಚಿತ್ರಕಥೆಯಲ್ಲಿ ನೆರವಾಗುವುದರ ಜೊತೆಗೆ ಬಣ್ಣವನ್ನೂ ಹಚ್ಚಿದ್ದಾರೆ. ಇಂತಿಷ್ಟೇ ಚಿತ್ರೀಕರಿಸಬೇಕು ಎಂದು ಮೊದಲೇ ನಿರ್ಧರಿಸಿದ್ದರಿಂದ ಅಚ್ಚುಕಟ್ಟಾಗಿ ಚಿತ್ರ ಮೂಡಿಬಂದಿದೆ. ಸಂಕಲನಕಾರರಾಗಿ ತಮಗೆ ಅಲ್ಲಿ ಹೆಚ್ಚು ಕೆಲಸವಿಲ್ಲ ಎಂದರು.

ಇದುವರೆಗೆ ಸೌಮ್ಯ ಸ್ವಭಾವದ ಪಾತ್ರಗಳನ್ನು ಮಾಡುತ್ತಿದ್ದ ನಟಿ ರೂಪಿಕಾ ಅವರಿಗೆ ಅದಕ್ಕೆ ತದ್ವಿರುದ್ಧವಾದ ಪಾತ್ರ ಸಿಕ್ಕಿದೆಯಂತೆ. ಅದು ತಮ್ಮ ಪ್ರತಿಭೆಗೆ ಸವಾಲೊಡ್ಡುವ ಪಾತ್ರ ಎಂದವರು ಹೇಳಿಕೊಂಡರು.

ಯತಿರಾಜ್ ಖಳನಾಯಕ ಶರತ್‌ಲೋಹಿತಾಶ್ವರ ಮಗನಾಗಿ ಕಾಣಿಸಿಕೊಂಡಿದ್ದಾರೆ. ಅವರದು ನೆಗೆಟಿವ್ ಛಾಯೆಯಿರುವ ಪಾತ್ರ. ಶ್ರೀವತ್ಸ ಐದು ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದು ಅವರ ಸಂಗೀತ ನಿರ್ದೇಶನದ ಮೊದಲ ಚಿತ್ರ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT