ಚನ್ನಪಟ್ಟಣ: ತಾಲ್ಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಆನೆಗಳ ಹಿಂಡು ರಾಗಿ ಕಣಗಳಿಗೆ ದಾಳಿ ಇಟ್ಟಿದ್ದು ಒಕ್ಕಣೆ ಮಾಡಲಾಗಿದ್ದ 10 ಕ್ವಿಂಟಲ್ಗೂ ಹೆಚ್ಚು ರಾಗಿಯನ್ನು ತಿಂದು ಹಾಕಿರುವ ಘಟನೆ ನಡೆದಿದೆ.
ದೊಡ್ಡನಹಳ್ಳಿಯ ಕೆಂಪೇಗೌಡ ಹಾಗೂ ನಿಂಗೇಗೌಡ ಎಂಬ ರೈತರು ರಾಗಿ ಒಕ್ಕಣೆ ಮಾಡಿ ಕಣದಲ್ಲಿ ರಾಶಿ ಹಾಕಿದ್ದರು. ರಾತ್ರಿ ವೇಳೆಯಲ್ಲಿ ಈ ಆನೆಗಳ ಹಿಂಡು ದಾಳಿ ನಡೆಸಿ ರಾಗಿ ರಾಶಿಯನ್ನು ತಿಂದು ಹಾಕಿವೆ.
ಕಣ ಕಾಯುತ್ತಿದ್ದ ತಮ್ಮಯ್ಯ ಎಂಬಾತ ಆನೆಗಳನ್ನು ಕಂಡು ಗಾಬರಿಯಿಂದ ಕೂಗಿಕೊಂಡನಾದರೂ ಸ್ಥಳಕ್ಕೆ ಜನರು ಬರುವಷ್ಟರಲ್ಲಿ ಆನೆಗಳು ರಾಗಿ ರಾಶಿಯನ್ನು ತಿಂದು ಪಕ್ಕದ ತೋಟಕ್ಕೆ ನುಗ್ಗಿ ಕಣ್ಮರೆಯಾಗಿವೆ.
ಕಾಡನಕುಪ್ಪೆಯಲ್ಲೂ ಪ್ರತ್ಯಕ್ಷ: ರಾಮನಗರ ತಾಲ್ಲೂಕಿನ ಕಾಡನಕುಪ್ಪೆ ಗ್ರಾಮದ ರಾಜಣ್ಣ ಎಂಬುವರ ಬಾಳೆತೋಟಕ್ಕೆ ನುಗ್ಗಿದ ಆನೆಗಳು ತೋಟವನ್ನು ಧ್ವಂಸಗೊಳಿಸಿವೆ.
ಒಂದು ತಿಂಗಳಿನಿಂದಲೂ ಐದು ಆನೆಗಳ ಹಿಂಡು ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಅಕ್ಕಪಕ್ಕದ ಗ್ರಾಮಗಳಿಗೆ ಆಗಮಿಸಿ ರೈತರ ಫಸಲನ್ನು ನಾಶ ಮಾಡುತ್ತಿವೆ. ರಾತ್ರಿ ವೇಳೆ ಪ್ರತ್ಯಕ್ಷವಾಗುವ ಈ ಆನೆಗಳು ಹಗಲು ವೇಳೆ ಕಾಡಿಗೆ ವಾಪಸಾಗುತ್ತಿವೆ.