ಮಾಲೂರು: ತಾಲ್ಲೂಕಿನ ಡಿ.ಎನ್.ದೊಡ್ಡಿ ಗ್ರಾಮದಲ್ಲಿ ವೆಂಕಟಗಿರಿಯಪ್ಪ ದನಗಳ ಜಾತ್ರೆ ಅಂಗವಾಗಿ ಶನಿವಾರ ನಡೆದ ಲಕ್ಷ್ಮಿವೆಂಕಟೇಶ್ವರಸ್ವಾಮಿ ರಥೋತ್ಸವ ಭಕ್ತರಿಗೆ ಎಲ್ಲೆ ಮೀರಿದ ಸಂಭ್ರಮ ತಂದಿತು. ಹುಣ್ಣಿಮೆಯ ದಿನವಾಗಿದ್ದರಿಂದ ಭಕ್ತ ಸಮೂಹ ಭಾವಭಕ್ತಿಗಳಿಂದ ರಥೋತ್ಸವದಲ್ಲಿ ಮಿಂದೆದ್ದಿತು.
ಗಡಿ ಭಾಗವಾದ ದಾದಿ ನಾಯಕನ ದೊಡ್ಡಿಯಲ್ಲಿ ವೆಂಕಟಗಿರಿಯಪ್ಪನ ದನಗಳ ಜಾತ್ರೆ ಪುರಾತನಾ ಕಾಲದಿಂದ ನಡೆಯುತ್ತಾ ಬಂದಿದ್ದು, ಜಾತ್ರೆ ಅಂಗವಾಗಿ ನಡೆಯುವ ಲಕ್ಷ್ಮಿವೆಂಕಟೇಶ್ವರಸ್ವಾಮಿ ದೇವಾಲಯದ ರಥೋತ್ಸವ ರಾಜ್ಯದ ಭಕ್ತರು ಮಾತ್ರವಲ್ಲದೆ ಮಿಳುನಾಡಿನ ಹೊಸೂರು ಬಾಗಲೂರು ಮತ್ತು ಸುತ್ತ ಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ರಥವನ್ನು ಎಳೆಯುತ್ತಿದ್ದಂತೆ ರಥದ ಕಳಶಕ್ಕೆ ಬಾಳೆಹಣ್ಣು ದವನ ಎಸೆಯುವ ಮೂಲಕ ತಮ್ಮ ಹರಿಕೆಗಳನ್ನು ಭಕ್ತರು ತೀರಿಸಿಕೊಂಡರು. ದೇವಾಲಯದ ಸುತ್ತ ಒಂದು ಪ್ರರ್ದಕ್ಷಿಣೆ ಹಾಕುವ ಮೂಲಕ ರಥೋತ್ಸವಕ್ಕೆ ತೆರೆ ಎಳೆಯಲಾಯಿತು.
ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ, ಜಿ.ಪಂ. ಅಧ್ಯಕ್ಷೆ ಮಂಜುಳಾ ವೇಂಕಟೇಶ್, ಸದಸ್ಯರಾದ ಯಲ್ಲಮ್ಮ, ಎ.ರಾಮಸ್ವಾಮಿ ರೆಡ್ಡಿ, ಯಶೋಧ ಕೃಷ್ಣಮೂರ್ತಿ, ತಾ.ಪಂ ಅಧ್ಯಕ್ಷ ಆರ್.ಆನಂದ್, ಸದಸ್ಯರಾದ ಎಸ್.ವಿ.ಲೋಕೇಶ್, ಪುಟ್ಟಸ್ವಾಮಿ, ಆಶಾ ರಾಜಪ್ಪ, ಕೃಷ್ಣಪ್ಪ, ಡಿ.ಎನ್.ದೊಡ್ಡಿ ಗ್ರಾ.ಪಂ. ಅಧ್ಯಕ್ಷೆ ಜಯಮ್ಮ, ಮುಖಂಡರಾದ ಕಲಾವಿದ ಸ್ವಾಮಿ, ರಮೇಶ್, ದೊಡ್ಡಿರಾಜಣ್ಣ ಮತ್ತಿತರರು ಜಾತ್ರೆಯಲ್ಲಿ ಪಾಲ್ಗೊಂಡರು.