ಆಲ್ದೂರು: ಪಟ್ಟಣದ ಹೃದಯ ಭಾಗದಲ್ಲಿರುವ ಹವ್ವಳ್ಳಿ ಸರ್ಕಲ್ನಿಂದ ಆಲ್ದೂರು-ಮೂಡಿಗೆರೆ ರಸ್ತೆ ಸಂಪರ್ಕಿಸುವ ದೊಡ್ಡಿಬೀದಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಡಾಂಬರಿನ ಲವಲೇಶ ಇಲ್ಲದಂತಾಗಿರುವ ರಸ್ತೆಯಲ್ಲಿ ವಾಹನ ಸಂಚಾರ, ಸಾರ್ವಜನಿಕರ ತಿರುಗಾಟಕ್ಕೆ ದುಸ್ಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹವಳ್ಳಿ ಸರ್ಕಲ್ನಿಂದ ಆಲ್ದೂರು-ಬಾಳೆಹೊನ್ನೂರು ಮತ್ತು ಆಲ್ದೂರು-ಮೂಡಿಗೆರೆ ರಸ್ತೆ ಸಂಪರ್ಕಿಸಲು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಪಕ್ಕದಲ್ಲಿ ಸುಮಾರು 500 ಮೀಟರ್ ಉದ್ದದ ರಸ್ತೆ ಇದೆ. ಆದರೆ ರಸ್ತೆ ಕಳೆದ 2 ದಶಕಗಳಿಂದ ಮರುಡಾಂಬರೀಕರಣದ ಭಾಗ್ಯ ಕಾಣದಿರುವುದರಿಂದ ರಸ್ತೆಯುದ್ದಕ್ಕೂ ಆಳಗಲದ ಗುಂಡಿಗಳು ಆವರಿಸಿಕೊಂಡಿವೆ.
ರಸ್ತೆಯ ಅಕ್ಕಪಕ್ಕದಲ್ಲಿರುವ ಚರಂಡಿಯನ್ನು ಗ್ರಾಪಂ ಸಕಾಲದಲ್ಲಿ ಸ್ವಚ್ಛಗೊಳಿಸದ ಕಾರಣ ಚರಂಡಿ ಕಸದ ಕೊಂಪೆಯಂತಾಗಿದ್ದು, ವ್ಯಾಪಕ ಮಳೆಯಾಗುತ್ತಿರುವುದರಿಂದ ಚರಂಡಿ ನೀರು ರಸ್ತೆಯ ಮೇಲೆಲ್ಲಾ ಹರಿಯುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಗೆ ಮರುಡಾಂಬರೀಕರಣ ಮಾಡಬೇಕೆಂಬುದು ನಾಗರಿಕರ ಮನವಿ.