ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ ಎಂಟು ರಾಜ್ಯಗಳಲ್ಲಿ ಹೈನು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ದೋಡ್ಲಾ ಡೇರಿ ಕಂಪೆನಿಯು 2012– 13ರ ಸಾಲಿನಲ್ಲಿ ಒಟ್ಟು ₨ 800 ಕೋಟಿ ವಹಿವಾಟು ನಡೆಸಿದೆ ಎಂದು ಕಂಪೆನಿಯ ಪ್ರಾದೇಶಿಕ ವ್ಯವಸ್ಥಾಪಕ ಜೆ.ಡಿ.ಇಜ್ರಾ ತಿಳಿಸಿದರು.
‘15 ವರ್ಷಗಳ ಹಿಂದೆ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಒಂದು ಸಣ್ಣ ಡೇರಿಯಾಗಿ ಆರಂಭವಾದ ನಮ್ಮ ಕಂಪೆನಿಯು ಈಗ ದೊಡ್ಡದಾಗಿ ಬೆಳೆದಿದೆ. ನಮ್ಮ ಡೇರಿಯು ಪ್ರತಿ ದಿನ 8.5 ಲಕ್ಷ ಲೀಟರ್ ಹಾಲು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಒಟ್ಟು 55 ಹಾಲಿನ ಶೀತಲೀಕರಣ ಘಟಕಗಳಿವೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ದೋಡ್ಲಾ ಉತ್ಪನ್ನಗಳ ಕುರಿತು ಕೆಲವರು ಅಪಪ್ರಚಾರ ನಡೆಸುತ್ತಿ ದ್ದಾರೆ. ನಮ್ಮ ಡೇರಿಯ ಹಾಲು ಸಂಸ್ಕರಣಾ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸುತ್ತಿಲ್ಲ. ನಾವು ಅಳವಡಿಸಿಕೊಂಡಿರುವ ಆಹಾರ ಸುರಕ್ಷಿತ ವ್ಯವಸ್ಥೆಯ ಮಾನ್ಯತೆಯನ್ನು ಪ್ರತಿ ಆರು ತಿಂಗಳಿಗೊಮ್ಮೆ ಹೊರಗಿನ ಸಂಸ್ಥೆಯೊಂದು ತಪಾಸಣೆ ನಡೆಸುತ್ತಿದೆ’ ಎಂದು ಅವರು ತಿಳಿಸಿದರು.
‘ನಮ್ಮದು ಐಎಸ್ಒ ಮಾನ್ಯತೆ ಪಡೆದ ಸಂಸ್ಥೆ ಎಂದು ಅವರು ಹೇಳಿದರು.ಘಟಕದ ವ್ಯವಸ್ಥಾಪಕ ವಿಶ್ವನಾಥ್ ರೆಡ್ಡಿ, ವ್ಯವಸ್ಥಾಪಕ ನರಹರಿ ಉಪಸ್ಥಿತರಿದ್ದರು.