ಕೃಷ್ಣರಾಜಪೇಟೆ: ಗಡಿ ಭದ್ರತಾ ಪಡೆಯಲ್ಲಿ ಯೋಧನಾಗಿದ್ದ ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದ ಜೆ. ಜಯರಾಮೇಗೌಡ (32) ಅಸ್ಸಾಂ ರಾಜ್ಯದಲ್ಲಿ ಬುಧವಾರ ಸಂಜೆ ನಡೆದ ದೋಣಿ ದುರಂತದಲ್ಲಿ ಮೃತಪಟ್ಟಿದ್ದಾರೆ.
ಭಾರತ- ಬಾಂಗ್ಲಾ ಗಡಿಭಾಗದಲ್ಲಿ ಕರ್ತವ್ಯ ನಿರತರಾಗಿದ್ದ ಯೋಧರಿಗೆ ಜಯರಾಮೇಗೌಡ ಬುಧವಾರ ಸಂಜೆ ಊಟ ತೆಗೆದುಕೊಂಡು ದೋಣಿಯಲ್ಲಿ ನದಿ ದಾಟುತ್ತಿದ್ದ ವೇಳೆ ಬೀಸಿದ ಅನಿರೀಕ್ಷಿತ ಬಿರುಗಾಳಿಯಿಂದ ಇವರಿದ್ದ ದೋಣಿ ಮಗುಚಿ ಕೊಂಡು ಮೃತಪ ಟ್ಟಿದ್ದಾರೆ ಎಂದು ಸಹವರ್ತಿಗಳು ಹೇಳಿದ್ದಾರೆ.
ಶುಕ್ರವಾರ ಅಂತಿಮ ಸಂಸ್ಕಾರ: ಬುಧ ವಾರ ರಾತ್ರಿ ಕುಟುಂಬದ ಸದಸ್ಯರಿಗೆ ಜಯ ರಾಮೇಗೌಡ ಅನಾರೋಗ್ಯ ಸ್ಥಿತಿಯಲ್ಲಿದ್ದಾನೆ ಎಂಬ ಮಾಹಿತಿ ಬಂದಿದೆ. ಗುರುವಾರ ಬೆಳಿಗ್ಗೆ ಮೃತಪಟ್ಟಿರುವ ವಿಷಯ ತಲುಪಿದೆ. ಸ್ವಗ್ರಾಮಕ್ಕೆ ಶವ ತರುವ ಬಗ್ಗೆ ಸಿದ್ಧತೆಗಳು ನಡೆದಿವೆ.
ಶುಕ್ರವಾರ ಸಂಜೆಯ ವೇಳೆಗೆ ಮೃತದೇಹ ಗ್ರಾಮಕ್ಕೆ ಬರಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸ್ನೇಹಮಯಿ: ಗ್ರಾಮದ ದೊಡ್ಡಜವರೇಗೌಡ ಮತ್ತು ನಂಜಮ್ಮ ದಂಪತಿಯ ಆರು ಮಕ್ಕಳ ಪೈಕಿ ಕೊನೆಯವರಾದ ಜಯರಾಮೇಗೌಡ 2002ರಲ್ಲಿ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿದ್ದರು.
ಹನ್ನೊಂದು ವರ್ಷಗಳಿಂದ ಬಾಂಗ್ಲಾ ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆರು ವರ್ಷಗಳ ಹಿಂದೆ ಮದುವೆಯಾಗ್ದ್ದಿದು, ಅವರಿಗೆ ಪತ್ನಿ ಮಮತಾ ಮತ್ತು ಪುತ್ರಿ ಲಕ್ಷ್ಮೀ ಇದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ಗ್ರಾಮದೇವತೆ ಬಾಚಳ್ಳಮ್ಮನ ಹಬ್ಬಕ್ಕೆ ಬಂದು ಹೋಗಿದ್ದರು. ದುರಂತ ಸಂಭವಿಸುವ ಕೇವಲ ಅರ್ಧ ಗಂಟೆಯ ಮೊದಲು ಆರು ಗಂಟೆಯ ವೇಳೆಗೆ ದೂರವಾಣಿಯಲ್ಲಿ ತಾಯಿ ನಂಜಮ್ಮ ಮತ್ತು ಪತ್ನಿ ಮಮತಾರೊಂದಿಗೆ ಮಾತನಾಡಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶೋಕತಪ್ತ ಗ್ರಾಮ: ಜಯರಾಮೇಗೌಡ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಗ್ರಾಮ ನೀರವ ಮೌನಕ್ಕೆ ಶರಣಾಗಿದ್ದು, ದುಃಖಮಯ ವಾತಾವರಣ ಎಲ್ಲೆಡೆ ಕಂಡು ಬರುತ್ತಿದೆ.