ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋನಿ ವಿರುದ್ಧ ಟೀಕೆ; ಬೌಷರ್ ಅಸಮಾಧಾನ

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇಂಗ್ಲೆಂಡ್ ಎದುರಿನ ಸರಣಿ ಸೋಲಿನ ಕಾರಣ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ವಿರುದ್ಧ ಎದ್ದಿರುವ ಟೀಕೆಗಳ ಬಗ್ಗೆ ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಮಾರ್ಕ್ ಬೌಷರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

`ಯಾವ ತಂಡ ಸೋಲು ಕಂಡಿಲ್ಲ ಹೇಳಿ? ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ತಂಡದ ಪರಿಸ್ಥಿತಿ ಹೇಗಿತ್ತು ಹೇಳಿ? ಈ ಸೋಲಿಗೆ ದೋನಿ ಒಬ್ಬರೇ ಕಾರಣವೇ?~ ಎಂದು ಬೌಷರ್ ಪ್ರಶ್ನಿಸಿದರು.
ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಉದ್ಯಾನ ನಗರಿಗೆ ಆಗಮಿಸಿರುವ ವಿಕೆಟ್ ಕೀಪರ್ ಬೌಷರ್ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದರು.  

`2005ರಲ್ಲಿ ಉತ್ತುಂಗದಲ್ಲಿದ್ದ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ನೆಲದಲ್ಲಿ ಸೋಲು ಕಂಡಿತ್ತು. ಇಂಗ್ಲೆಂಡ್ ವಾತಾವರಣಕ್ಕೆ ಹೊಂದಿಕೊಂಡು ಆಡುವುದು ಅಷ್ಟು ಸುಲಭವಲ್ಲ. ಜೊತೆಗೆ ಭಾರತದ ಪ್ರಮುಖ ಆಟಗಾರರು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಇಂಗ್ಲೆಂಡ್ ಕೂಡ ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿದೆ~ ಎಂದು ಅವರು ಭಾರತ ತಂಡದ ಪ್ರದರ್ಶನವನ್ನು ಸಮರ್ಥಿಸಿಕೊಂಡರು.

`ವಿಶ್ವಕಪ್ ಗೆದ್ದಾಗ ನಾಯಕ ದೋನಿ ಹಾಗೂ ಉಳಿದ ಆಟಗಾರರನ್ನು ಹೊಗಳಿದ್ದೇ ಹೊಗಳಿದ್ದು. ಈಗ ಅವರತ್ತ ಟೀಕಾ ಪ್ರವಾಹವೇ ಹರಿಯುತ್ತಿದೆ. ಇದಕ್ಕೆ ನನ್ನ ವಿರೋಧವಿದೆ. ದೋನಿ ಅತ್ಯುತ್ತಮ ನಾಯಕರಲ್ಲಿ ಒಬ್ಬರು. ಅವರ ನಾಯಕತ್ವ ಶೈಲಿಯೂ ವಿಭಿನ್ನ~ ಎಂದು ಬೌಷರ್ ಮೆಚ್ಚುಗೆಯ ಮಾತುಗಳನ್ನು ಹರಿಬಿಟ್ಟರು.

ದೋನಿ ವಿಕೆಟ್ ಕೀಪಿಂಗ್‌ನಲ್ಲಿ ವೈಫಲ್ಯ ಕಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಇಂಗ್ಲೆಂಡ್ ನೆಲದಲ್ಲಿ ವಿಕೆಟ್ ಕೀಪರ್ ಕಷ್ಟದ ಕೆಲಸ. ಇಂಗ್ಲೆಂಡ್ ಪ್ರವಾಸದ ವೇಳೆ ನಾನು ಕೂಡ ಕಷ್ಟದ ಪರಿಸ್ಥಿತಿ ಎದುರಿಸಿದ್ದೆ~ ಎಂದರು.

ವಿಕೆಟ್ ಕೀಪಿಂಗ್‌ನಲ್ಲಿ ವಿಶ್ವದಾಖಲೆ ಹೊಂದಿರುವ ಬೌಷರ್ ಚಾಂಪಿಯನ್ಸ್ ಲೀಗ್‌ನಲ್ಲಿ ವಾರಿಯರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ತಂಡದವರು ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಪೈಪೋಟಿ ನಡೆಸಲಿದ್ದಾರೆ.

`ನನಗೆ ಬೆಂಗಳೂರಿನ ವಾತಾವರಣದ ಪರಿಚಯವಿದೆ. ಕಾರಣ ರಾಯಲ್ ಚಾಲೆಂಜರ್ಸ್ ತಂಡ ಪ್ರತಿನಿಧಿಸುತ್ತಿದ್ದ ಸಮಯದಲ್ಲಿ ಇಲ್ಲಿ ಹೆಚ್ಚಿನ ಸಮಯ ಕಳೆದಿದ್ದೇನೆ. ಪಿಚ್ ಬಗ್ಗೆಯೂ ಮಾಹಿತಿ ಇದೆ~ ಎಂದು ಅವರು ನುಡಿದರು.

`ಭಾರತದಲ್ಲಿ ನನಗೆ ಬೆಂಗಳೂರು ಇಷ್ಟವಾದ ನಗರ. ಇದು ನನಗೆ ಎರಡನೇ ಮನೆ ಎಂದೇ ಹೇಳಬಹುದು. ಇಲ್ಲಿನ ವಾತಾವರಣ ಹಾಗೂ ಆಹಾರ ನನಗಿಷ್ಟ~ ಎಂದು 34 ವರ್ಷ ವಯಸ್ಸಿನ ಮೌಷರ್ ನುಡಿದರು.

ಬೌಷರ್ ಐಪಿಎಲ್ ಟೂರ್ನಿಯ ಮೊದಲ ಮೂರು ಅವತರಣಿಕೆಯಲ್ಲಿ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ನಾಲ್ಕನೇ ಅವತರಣಿಕೆಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪರ ಆಡಿದ್ದರು.

ಕಳೆದ ಚಾಂಪಿಯನ್ಸ್ ಲೀಗ್‌ನಲ್ಲಿ ವಾರಿಯರ್ಸ್ ರನ್ನರ್ ಅಪ್ ಆಗಿತ್ತು. `ಈ ಬಾರಿ ನಾವು ಅತ್ಯುತ್ತಮ ಸಿದ್ಧತೆ ನಡೆಸಿದ್ದೇವೆ. ಕಳೆದ ಬಾರಿಯ ನಿರಾಸೆಯನ್ನು ಹೋಗಲಾಡಿಸುವ ವಿಶ್ವಾಸವಿದೆ. ತಂಡ ಅನುಭವಿ ಹಾಗೂ ಯುವ ಆಟಗಾರರಿಂದ ಕೂಡಿದೆ~ ಎಂದರು.

ವಾರಿಯರ್ಸ್ ತಂಡದ ನಾಯಕ ಜೋಹಾನ್ ಬೋಥಾ ಕೂಡ ಈ ಬಾರಿಯ ಉತ್ತಮ ಪ್ರದರ್ಶನ ನೀಡುವ ಭರವಸೆ ವ್ಯಕ್ತಪಡಿಸಿದರು. `ಆರ್‌ಸಿಬಿ ಎದುರಿನ ಮೊದಲ ಪಂದ್ಯ ಸವಾಲಿನಿಂದ ಕೂಡಿದೆ. ಗೆಲುವಿನ ಆರಂಭ ಪಡೆಯಲು ನಾವು ಪೂರ್ಣ ಸಿದ್ಧರಾಗಿ ಬಂದಿದ್ದೇವೆ. ಆದರೆ ತಂಡ ಒತ್ತಡದ ಪರಿಸ್ಥಿತಿ ಎದುರಿಸುತ್ತಿದೆ~ ಎಂದು ಹೇಳಿದರು.

`ಈ ಟೂರ್ನಿಗಾಗಿ ನಾವು ಮೂರು ತಿಂಗಳಿನಿಂದ ಸಿದ್ಧತೆ ನಡೆಸುತ್ತಿದ್ದೇವೆ. ಇಲ್ಲಿನ ವಾತಾರಣದ ಬಗ್ಗೆ ಹೆಚ್ಚಿನ ಆಟಗಾರರಿಗೆ ಪರಿಚಯವಿದೆ. ಐಪಿಎಲ್ ಟೂರ್ನಿಯೇ ಇದಕ್ಕೆ ಕಾರಣ. ವಿಶ್ವಕಪ್ ವೇಳೆ ಇಲ್ಲಿ ಆಸ್ಟ್ರೇಲಿಯಾ ಎದುರು ಅಭ್ಯಾಸ ಪಂದ್ಯ ಆಡಿದ್ದೆವು~ ಎಂದು ಆಲ್‌ರೌಂಡರ್ ಬೋಥಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT