ರಾಂಚಿ (ಐಎಎನ್ಎಸ್): ತವರು ನೆಲದಲ್ಲಿ ಇಂಗ್ಲೆಂಡ್ಗೆ ಸರಣಿ ಸೋಲಿನ ಮುಯ್ಯಿ ತೀರಿಸಿ ಸಂತಸದಲ್ಲಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿಗೆ ಈಗ ದೀಪಾವಳಿ ಹಬ್ಬ ಆಚರಿಸುವ ಸಂಭ್ರಮ.
ಪ್ರವಾಸಿ ಇಂಗ್ಲೆಂಡ್ ವಿರುದ್ಧ ಒಂದು ಟ್ವೆಂಟಿ-20 ಪಂದ್ಯವನ್ನಾಡಲಿರುವ ಭಾರತದ ಆಟಗಾರರು ಹಬ್ಬದ ಕಾರಣಕ್ಕಾಗಿ ಎರಡು ದಿನದ ಮಟ್ಟಿಗೆ ತವರೂರಿಗೆ ತೆರಳಿದ್ದಾರೆ. ರಾಂಚಿ ಹಾಗೂ ಜೇಮ್ಶೇಡ್ಪುರದ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿರುವ ದೇವೊರಿ ಗ್ರಾಮದ ಬಳಿ ಪೂಜೆ ಸಲ್ಲಿಸಿದರು. ಇದರಿಂದ ಭಾರಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಬುಧವಾರ ರಾಂಚಿಗೆ ತೆರಳಿದ ದೋನಿ ಪತ್ನಿ ಸಾಕ್ಷಿ ಹಾಗೂ ಕುಟುಂಬ ವರ್ಗದ ಜೊತೆ ಜೊತೆ ದೀಪಾವಳಿ ಆಚರಿಸಿದರು.
ಇಂದು ಆಯ್ಕೆ ಸಮಿತಿ ಸಭೆ: ವೆಸ್ಟ್ ಇಂಡೀಸ್ ವಿರುದ್ಧ ನವೆಂಬರ್ನಲ್ಲಿ ನಡೆಯಲಿರುವ ಟೆಸ್ಟ್ ಕ್ರಿಕೆಟ್ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲು ಶುಕ್ರವಾರ ಕೋಲ್ಕತ್ತದಲ್ಲಿ ಆಯ್ಕೆ ಸಮಿತಿ ಸಭೆ ನಡೆಯಲಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ `ಔಟ್~ ಆಗಿದ್ದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ಗೆ ತಂಡದಲ್ಲಿ ಮತ್ತೆ ಸ್ಥಾನ ನೀಡುವ ಕುರಿತು ಸಹ ಚರ್ಚೆಯಾಗಲಿದೆ.
ಬೆಂಗಳೂರಿನ ಆರ್. ಅಶ್ವಿನ್, ಅಮಿತ್ ಮಿಶ್ರಾ ಹಾಗೂ ಪ್ರಗ್ಯಾನ್ ಓಜಾ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸ ಹೊಂದಿದ್ದಾರೆ. ಗಾಯಗೊಂಡಿರುವ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಸಹ ಫಿಟ್ ಆಗಿದ್ದಾರೆ ಎನ್ನುವ ವಿಶ್ವಾಸ ಆಯ್ಕೆ ಸಮಿತಿಯದ್ದು. ಅಶ್ವಿನ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 10 ವಿಕೆಟ್ ಪಡೆದಿದ್ದರು.