ಮಳವಳ್ಳಿ: ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಸಮಸ್ಯೆಗಳಿಗೆ ಸರ್ಕಾರದ ನೀತಿಗಳೇ ಕಾರಣವಾಗಿದ್ದು ಇದನ್ನು ಕಿತ್ತು ಹಾಕಬೇಕಾದರೆ ಎಲ್ಲರ ಸಂಘಟನೆ ಮತ್ತು ರಾಜಕೀಯ ಅಧಿಕಾರದ ಅವಶ್ಯಕತೆ ಇದೆ ಎಂದು ಮಾಜಿ ಸಚಿವ ಬಿ.ಸೋಮಶೇಖರ್ ಅಭಿಪ್ರಾಯಪಟ್ಟರು.
ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ಭಾನುವಾರ ದಲಿತ ಸಂಘಟನೆಗಳ-ಸಮನ್ವಯ ವೇದಿಕೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 56ನೇ ಪರಿನಿರ್ವಾಣ ದಿನದ ಅಂಗವಾಗಿ `ಪ್ರಸ್ತುತ ರಾಜಕಾರಣ ಸಾಮಾಜಿಕ ನ್ಯಾಯ ಮತ್ತು ಸವಾಲುಗಳು' ಕುರಿತ ತಾಲ್ಲೂಕು ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ದಲಿತರೇ ಹೆಚ್ಚಾಗಿದ್ದರೂ ಅಧಿಕಾರದ ಆಸೆಗಾಗಿ ಇತರರು ಸಂವಿಧಾನದ ಆಶಯವನ್ನೆ ಬದಲಾವಣೆ ಮಾಡುತ್ತ್ದ್ದಿದಾರೆ. ಇದು ಬದಲಾಗಬೇಕಾದರೆ ದಲಿತರು ಒಗ್ಗಟ್ಟಾಗಿ ದಲಿತ ನಾಯಕರನ್ನು ಬೆಳೆಸಬೇಕಿದೆ ಎಂದರು. ದಲಿತರ ಮತಗಳು ರಚನೆಯಾದ ನಂತರ ಎಲ್ಲ ಸರ್ಕಾರಗಳು ದಲಿತನ್ನೇ ಶೋಷಣೆ ಮಾಡುತ್ತ ಬಂದಿದ್ದು ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಮೈಸೂರು ಮಾನವ ಸಂಪನ್ಮೂಲ ಕೇಂದ್ರದ ಕಾರ್ಯಕ್ರಮ ಸಂಯೋಜನಾಧಿಕಾರಿ ತುಕರಾಂ `ಪ್ರಸ್ತುತ ರಾಜಕಾರಣ ಸಮಾಜಿಕ ನ್ಯಾಯ ಮತ್ತು ಸವಾಲುಗಳು' ಕುರಿತು ವಿಷಯ ಮಂಡನೆ ಮಾಡಿದರು. ದಲಿತ ಸಂಘಟನೆಗಳ ಸಮನ್ವಯ ವೇದಿಕೆ ಅಧ್ಯಕ್ಷ ಆರ್.ಎನ್.ಪರಶಿವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಪಿಸಿಸಿ ಸದಸ್ಯ ವೈ.ಎಸ್.ಸಿದ್ದರಾಜು, ಆದರ್ಶ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಮೂರ್ತಿ, ನಿವೃತ್ತ ಎಂಜಿನಿಯರ್ ಎಲ್.ಶಿವಲಿಂಗಯ್ಯ, ವಕೀಲ ಎಚ್.ಡಿ.ಅಮರ್ನಾಥ್, ಬಿಎಸ್ಪಿ ಮುಖಂಡ ಕೃಷ್ಣಮೂರ್ತಿ, ದಸಂಸ ಮುಖಂ ಎಸ್.ಎಂ.ಕೃಷ್ಣ ಇದ್ದರು.