ಚಿತ್ರದುರ್ಗ: `ಮಾನವನ ಹಿತಕ್ಕಾಗಿ ಹಾಗೂ ರಕ್ಷಣೆಗಾಗಿ ಸಂವಿಧಾನ ನೀಡಿರುವ ಹಕ್ಕುಗಳನ್ನು ಬಳಸಿ. ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿ ಇಂಥ ಹಕ್ಕುಗಳನ್ನು ಸಮರ್ಪಕವಾಗಿ ಬಳಸಿ ಕೊಂಡಾಗ ಮಾತ್ರ ಸಂವಿಧಾನದ ರಚನೆ ಸಾರ್ಥಕವಾಗುತ್ತದೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಡಾನ್ಬಾಸ್ಕೊ ಶಾಲೆಯಲ್ಲಿ ಗುರುವಾರ `ಮಾನವ ಹಕ್ಕುಗಳ ಮತ್ತು ಮಕ್ಕಳ ಹಕ್ಕುಗಳ' ಕುರಿತು 22 ಸರ್ಕಾರಿ ಶಾಲೆಗಳ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
`ಶಿಕ್ಷಕರು ಮಕ್ಕಳಿಗಾಗಿರುವ ಹಕ್ಕುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದಾಗ ವಿದ್ಯಾರ್ಥಿಗಳು ತಮ್ಮ ಮೇಲೆ ದೌರ್ಜನ್ಯ ನಡೆದ ಸಂದರ್ಭದಲ್ಲಿ ಹಕ್ಕು ಚಲಾಯಿಸಲು ಸಹಕಾರಿ ಯಾಗಲಿದೆ' ಎಂದು ಸಲಹೆ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ. ವೆಂಕಟಲಕ್ಷ್ಮಿ ಮಾತನಾಡಿ, `ದೌರ್ಜನ್ಯ ಮೆಟ್ಟಿ ನಿಲ್ಲಬೇಕಾದರೆ, ಪ್ರಸ್ತುತದಲ್ಲಿ ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ಅರಿತಿದ್ದರೆ ಉತ್ತಮ. ಇಲ್ಲದಿದ್ದರೆ ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾಗುತ್ತದೆ' ಎಂದರು.
`ಶಿಕ್ಷಕರು, ಪೋಷಕರು ಸೇರಿದಂತೆ ಯಾರೇ ಆಗಲಿ ಮಕ್ಕಳಿಗೆ ಕಿರುಕುಳ, ಹಿಂಸೆ ಹಾಗೂ ದೌರ್ಜನ್ಯಕ್ಕೆ ಮುಂದಾದರೆ ಅದನ್ನು ಆಯೋಗದ ಗಮನಕ್ಕೆ ತಂದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥ ಎಂದು ಸಾಬೀತಾದರೆ, ಶಿಕ್ಷೆಗೆ ಗುರಿಪಡಿಸಲಾಗುವುದು' ಎಂದು ತಿಳಿಸಿದರು.
ನಗರದ ಡಾನ್ಬಾಸ್ಕೊ ಸಂಸ್ಥೆಯ ವ್ಯವಸ್ಥಾಪಕ ಫಾದರ್ ವರ್ಗೀಸ್ ಪಳ್ಳಿಪುರಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಚಾರ್ಯ ಫಾದರ್ ಆನಂದ್, ಫಾದರ್ ಟೋಮಿ, ಫಾದರ್ ವಿನ್ಸೆಂಟ್ ರಾಜ್, ಆಡಳಿತಾಧಿಕಾರಿ ಫಾದರ್ ಮನು, ನಿರ್ದೇಶಕ ಫಾದರ್ ಮರಿಯಾ ಜೂಲಿಯನ್, ಬೆಂಗಳೂರಿನ ಸಿಕ್ರೆಮ್ ಸಂಸ್ಥೆಯ ಸಂಪನ್ಮೂಲವ್ಯಕ್ತಿ ಮಾರ್ಗೆಟ್ ಸಂಪತ್ ಹಾಜರಿದ್ದರು.