ನಾಗಮಂಗಲ: ರಾಜಕೀಯಕ್ಕೆ ಬಂದಿರುವುದು ದ್ವೇಷ ಸಾಧಿಸಲು ಅಲ್ಲ. ದ್ವೇಷದ ರಾಜಕಾರಣ ನನ್ನ ಧ್ಯೇಯವಲ್ಲ ಎಂದು ಶಾಸಕ ಸುರೇಶ್ಗೌಡ ಹೇಳಿದರು.
ಭಾನುವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಜನಪ್ರತಿನಿಧಿಗಳಿಗೆ ಕಲ್ಲು ಹೊಡೆಸುವುದು. ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದು ರಾಜಕಾರಣವಲ್ಲ. ಕಳೆದ 15 ವರ್ಷಗಳು ತಾಲ್ಲೂಕು ದ್ವೇಷದ ರಾಜಕಾರಣದ ದಳ್ಳುರಿಗೆ ಸಿಲುಕಿ ನಲುಗಿದೆ. ಇದನ್ನು ಕಂಡು ರಾಜಕೀಯದಲ್ಲಿ ಮಾರ್ಪಾಡು ತರಲು ರಾಜಕೀಯಕ್ಕೆ ಬಂದಿದ್ದೇನೆ ಎಂದರು.
3 ವರ್ಷಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ ರಾಜಕೀಯ ಗಲಭೆ, ಘರ್ಷಣೆಗೆ ಆಸ್ಪದ ನೀಡಿಲ್ಲ. ಶಾಂತಿ, ಸುವ್ಯವಸ್ಥೆಗೆ ಗಮನ ನೀಡಿದ್ದೇನೆ. ಮಾರ್ಕೋನ ಹಳ್ಳಿಯಿಂದ ತಾಲ್ಲೂಕಿನ 200ಕ್ಕೂ ಹೆಚ್ಚು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಯೋಜನೆ ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದೇನೆ. ಕೆಲವೇ ತಿಂಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಆಶ್ರಯ ಯೋಜನೆಯಡಿ 8 ಸಾವಿರ ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಅರ್ಹರಿಗೆ ಮನೆ ಹಂಚಲು ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡ್ದ್ದಿದೇನೆ ಎಂದರು.
ತಾಲ್ಲೂಕಿಗೆ ರೂ. 11 ಕೋಟಿ ಅನುದಾನ ಬಿಡುಗಡೆಯಾಗಿದೆ. ಜನ ತಮ್ಮನ್ನು ಆಯ್ಕೆ ಮಾಡಿರುವುದು ಜನರಿಗೆ ಒಳಿತು ಮಾಡಲು. ಅದನ್ನು ಬಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಲ್ಲದ ಆರೋಪ ಮಾಡುತ್ತಿದ್ದಾರೆ. ತಮ್ಮ ಮೇಲೆ ನಡೆದ ಹಲ್ಲೆ ವಿರೋಧ ಪಕ್ಷಗಳ ತಂತ್ರ ಎಂದು ಯಾರಲ್ಲಿಯೂ ಹೇಳಿಲ್ಲ. ಪೊಲೀಸರಿಗೆ ನಿಜವಾದ ಅಪರಾಧಿಗಳು ಸಿಕ್ಕರೆ ಬಂಧಿಸಿ ಎಂದು ಮನವಿ ಮಾಡಿದ್ದೇನೆ. ಚುನಾವಣೆ ಬಂದಾಗ ರಾಜಕೀಯ ಮಾಡಲಿ. ಅಭಿವೃದ್ಧಿಗೆ ಅಡ್ಡಿ ಬೇಡ ಎಂದರು.
ಶಾಸಕರ ಮೇಲಿನ ನಡೆದ ಹಲ್ಲೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರೇಗೌಡ ಖಂಡಿಸಿದರು. ಪ್ರಕರಣದ ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಹುಚ್ಚೇಗೌಡ ಮಾತನಾಡಿ, ಇದು ಅವರ ಕಾರ್ಯವೈಖರಿಗೆ ಅಡ್ಡಿ ಉಂಟು ಮಾಡುವ ಯತ್ನ. ಇದು ಅಕ್ಷಮ್ಯ ಎಂದರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಕೃಷ್ಣೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಸೈಯ್ಯದ್ ಸಲೀಂ, ಮುಖಂಡರಾದ ಡಿ.ಟಿ. ಶ್ರೀನಿವಾಸ್, ಮಂಜೇಗೌಡ, ಬಿ.ಸಿ. ಮೋಹನ್ಕುಮಾರ್, ನರಸಿಂಹ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.