ಕೊಪ್ಪಳ: ನಗರಸಭೆ ಆವರಣದಲ್ಲಿರುವ ಮರಗಳನ್ನು ಕಡಿದು, ಸಾಗಾಟ ಮಾಡಿದ್ದನ್ನು ಖಂಡಿಸಿ ನಗರಸಭಾ ಸದಸ್ಯ ವೀರಣ್ಣ ಹಂಚಿನಾಳ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಮರಗಳನ್ನು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ವೊಂದನ್ನು ನಿಲ್ಲಿಸಿ ಆಕ್ಷೇಪ ವ್ಯಕ್ತಪಡಿಸಿದ ವೀರಣ್ಣ, ನಂತರ ಸ್ಥಳಕ್ಕೆ ಭೇಟಿ ನೀಡಿದ ಪೌರಾಯಕ್ತೆ ಬಿ.ಎಂ.ಅಶ್ವಿನಿ ಅವರನ್ನೂ ತರಾಟೆಗೆ ತೆಗೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೀರಣ್ಣ, ರಸ್ತೆ ವಿಸ್ತರಣೆಗೆ ಅಡ್ಡಿಯಾಗುತ್ತಿದ್ದಂತಹ ಮರಗಳನ್ನು ಕಡಿದರೆ ಯಾರದೂ ಆಕ್ಷೇಪ ಇಲ್ಲ. ಆದರೆ, ರಸ್ತೆಯಿಂದ ಸಾಕಷ್ಟು ದೂರದಲ್ಲಿರುವ ಈ ಮರಗಳನ್ನು ಕಡಿದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಮರಗಳನ್ನು ಕಡಿಯುವ ಸಂಬಂಧ ನಾಗೇಶ ಬಡಿಗೇರ್ ಎಂಬುವವರಿಗೆ ಟೆಂಡರ್ ಆಗಿದೆ ಎಂದು ನಗರಸಭೆ ಮೂಲಗಳು ಹೇಳುತ್ತವೆ. ಆದರೆ, ಈ ಮರಗಳನ್ನು ಕಡಿಯಲು ಟೆಂಡರ್ ಏಕೆ ನೀಡಲಾಗಿದೆ ಎಂಬ ಪ್ರಶ್ನೆಗೆ ಯಾರೂ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದರು.
ಈ ಘಟನೆ ಕುರಿತಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರಿಗೂ ಮಾತನಾಡಿದ್ದೇನೆ. ದೂರು ಸಲ್ಲಿಸಿದ ನಂತರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ, ಮರಗಳನ್ನು ಕಡಿದು ಹಾಕಿದ ನಂತರ ದೂರು ಕೊಟ್ಟರೆ ಏನು ಫಲ. ಯಾರ ಮೇಲೆ ಕ್ರಮ ಜರುಗಿಸುತ್ತಾರೆ ಎಂದು ಸಂಶಯ ವ್ಯಕ್ತಪಡಿಸಿದರು.
ಒಟ್ಟಾರೆ ಈ ಘಟನೆಗೆ ನಗರಸಭೆ ಹಾಗೂ ಜಿಲ್ಲಾಡಳಿತವೇ ನೇರ ಹೊಣೆ ಎಂದ ಅವರು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.