ಬೆಂಗಳೂರು: `ರಾಷ್ಟ್ರಕ್ಕೆ ಸಂವಿಧಾನ ಇರುವಂತೆ ಧರ್ಮಕ್ಕೂ ಒಂದು ಸಂವಿಧಾನವಿದೆ. ಸುಸಂಸ್ಕೃತ ಸಮಾಜ ನಿರ್ಮಾಣವೇ ಧರ್ಮದ ಗುರಿ~ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಶರನ್ನವರಾತ್ರಿ ದಸರಾ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, `ಸತ್ಯದಿಂದ ಧರ್ಮ, ಯೋಗದಿಂದ ವಿದ್ಯೆ, ಸ್ವಚ್ಛತೆಯಿಂದ ರೂಪ ಮತ್ತು ಸದ್ವರ್ತನೆಯಿಂದ ಕುಲದ ಸಂರಕ್ಷಣೆಯಾಗುತ್ತದೆ. ಬದುಕಿನಲ್ಲಿ ಇವುಗಳನ್ನು ಅಳವಡಿಸಿಕೊಳ್ಳಬೇಕು~ ಎಂದರು.
`ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳ ಸಾತ್ವಿಕ ಭಾವನೆಗಳನ್ನು ಹೊಂದಿ ಜನಮನವನ್ನು ತಿದ್ದುವಂತಹ ಆದರ್ಶ ಮೌಲ್ಯಗಳನ್ನು ಹೊಂದಿದ್ದರು~ ಎಂದರು.
ಹಿ.ಚಿ.ಶಾಂತವೀರಯ್ಯ ಅವರ `ವೀರಶೈವಾಮೃತ ಪುರಾಣ~ ಕೃತಿ ಬಿಡುಗಡೆ ಮಾಡಿದ ರಾಜ್ಯಸಭಾ ಸದಸ್ಯ ನ್ಯಾಯಮೂರ್ತಿ ಎಂ.ರಾಮಾ ಜೋಯಿಸ್ ಮಾತನಾಡಿ, `ಅಣ್ಣಾ ಹಜಾರೆ ಅವರ ಆಂದೋಲನವು ಅಪರಾಧಿಗಳಿಗೆ ಶಿಕ್ಷಿಸುವ ಕಾನೂನು ರಚನೆಗಾಗಿ ಹೋರಾಟವಾಗಿದೆ. ಈ ದಸರಾ ಮಹೋತ್ಸವವು ಜನರಿಗೆ ಅಪರಾಧ ಮಾಡಬೇಡಿರಿ ಎಂಬ ಸಂದೇಶ ನೀಡುತ್ತಿದೆ~ ಎಂದರು.
`ಪಂಚಾಚಾರ್ಯಪ್ರಭಾ~ ವಾರಪತ್ರಿಕೆ ಬಿಡುಗಡೆ ಮಾಡಿದ ಸಚಿವೆ ಶೋಭಾ ಕರಂದ್ಲಾಜೆ, `ಧರ್ಮಗಳ ವೈರುಧ್ಯಗಳನ್ನು ತಡೆಗಟ್ಟಿ ಸಾಮರಸ್ಯ ಮೂಡಿಸುವ ಶಕ್ತಿ, ಜನತೆಗೆ ಉತ್ತಮ ಗುರಿ ನೀಡುವ ಶಕ್ತಿ ಪಂಚಪೀಠದ ಜಗದ್ಗುರುಗಳಿಗಿದೆ~ ಎಂದು ಹೇಳಿದರು.
ಜಿ.ಎಸ್.ಫಣಿಭೂಷಣ `ಮೌಲ್ಯ ತುಂಬಿದ ಮಾತುಗಳು~ ಕುರಿತು ಉಪನ್ಯಾಸ ನೀಡಿದರು. ವಿಭೂತಿಪುರಮಠದ ಡಾ.ಮಹಾಂತಲಿಂಗ ಶಿವಾಚಾರ್ಯರು `ಪಂಚಾಚಾರದ ಮಹತ್ವ~ ಕುರಿತು ಉಪನ್ಯಾಸ ನೀಡಿದರು.
ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಭಾಪತಿ ಬಿ.ಎಲ್.ಶಂಕರ್, ಬಿಬಿಎಂಪಿ ಸದಸ್ಯರಾದ ಎನ್.ಶಾಂತಕುಮಾರಿ, ಬಿ.ಎಸ್. ಆನಂದ್, ಹಾಗೂ ಎಚ್.ಆರ್.ಕಷ್ಣಪ್ಪ ಉಪಸ್ಥಿತರಿದ್ದರು.
ಭರತನಾಟ್ಯ: ಹಾಸನದ ಗಾನವಿ ವೀರಭದ್ರಪ್ಪ ಭರತನಾಟ್ಯ ಪ್ರದರ್ಶನ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.