ಮುಂಬೈ: ‘ಸೇಡಿನ ರಾಜಕಾರಣ ಮಾಡುವ ಹಾಗೂ ಕಾರ್ಪೊರೇಟ್ ಕುಳಗಳ ಬೆಂಬಲವಿರುವ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿಗೆ ಅಧಿಕಾರ ಸೂತ್ರ ಸಿಗದಂತೆ ಮಾಡುವ ದಿಸೆಯಲ್ಲಿ, ಎಲ್ಲಾ ಧರ್ಮನಿರಪೇಕ್ಷ ಪಕ್ಷಗಳು ಒಗ್ಗೂಡಬೇಕು’ ಎಂದು ವಿಚಾರವಾದಿಗಳು, ಚಿಂತಕರು ಮತ್ತು ಪ್ರಗತಿಪರರು ಕರೆ ನೀಡಿದ್ದಾರೆ.
ಈ ವಲಯದ ಪ್ರಮುಖರು ಸಹಿ ಮಾಡಿ ನೀಡಿರುವ ಪತ್ರಿಕಾ ಹೇಳಿಕೆ ಹೀಗಿದೆ: ‘ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಜನಸಮುದಾಯಗಳ ನಡುವೆ ಒಡಕುಂಟು ಮಾಡಿದ, ನಿಂದನಾತ್ಮಕ ಹಾಗೂ ಹಿಂಸಾತ್ಮಕ ಪ್ರಚಾರವನ್ನು ನೋಡಿದ್ದೇವೆ. ಅದರಲ್ಲೂ ಮೋದಿ ಅವರ ನೇತೃತ್ವದ ಬಿಜೆಪಿಯು ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ದಲಿತರನ್ನು ಗುರಿಯಾಗಿಸಿಕೊಂಡು ಕಟುವಾದ ಟೀಕೆಗಳನ್ನು ಮಾಡಿದೆ’.
‘ಬಿಜೆಪಿಯು ಸಾಂಸ್ಕೃತಿಕ ಮತ್ತು ಭಾಷಾ ಅಲ್ಪಸಂಖ್ಯಾತರು– ಬುಡಕಟ್ಟು ಸಮುದಾಯ– ಬುಡಕಟ್ಟು ಹಿತಾಸಕ್ತಿ ಹಾಗೂ ಹಕ್ಕುಗಳಿಗೂ ವಿರುದ್ಧವಾಗಿದೆ’.
‘ರಾಷ್ಟ್ರಕ್ಕೆ ಮೋದಿ ಅವರ ನಾಯಕತ್ವ ಅನಿವಾರ್ಯವೇನಲ್ಲ. ಹೊಸ ಸರ್ಕಾರ ರಚನೆಯ ಕೀಲಿ ಕೈ ನಿಮ್ಮಗಳ ಕೈಯಲ್ಲಿ ಇದೆ. ಚುನಾವಣೆಗೆ ಮುನ್ನ ನೀವು ಏನೇನು ಭರವಸೆಗಳನ್ನು ಕೊಟ್ಟಿದ್ದೀರೆಂದು ಒಮ್ಮೆ ನೆನಪಿಸಿಕೊಳ್ಳಿ. ಧರ್ಮನಿರಪೇಕ್ಷತೆಯು ಕೇವಲ ಚುನಾವಣಾ ಪ್ರಣಾಳಿಕೆಯಲ್ಲಿನ ಆಕರ್ಷಕ ಪದಪುಂಜವಲ್ಲ; ಅದು ಪ್ರಜಾಪ್ರಭುತ್ವದ ಬೆನ್ನೆಲುಬು’.
ನೃತ್ಯಗಾರ್ತಿ ಅದಿತಿ ಮಂಗಲ್ದಾಸ್, ಜೆಎನ್ಯು ಪ್ರೊಫೆಸರ್ ಆದಿತ್ಯ ಮುಖರ್ಜಿ, ಸಾಕ್ಷ್ಯಚಿತ್ರ ನಿರ್ಮಾಪಕ ಆನಂದ್ ಪಟವರ್ಧನ್, ಚಿತ್ರ ನಿರ್ದೇಶಕ ಕುಂದನ್ ಷಾ, ಗಾಯಕಿ ಶುಭಾ ಮುದ್ಗಲ್ ಮತ್ತಿತರರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.