ಧರ್ಮಪುರ: ಸ್ವ-ಸಹಾಯ ಸಂಘಗಳು ಹಾಗೂ ರೈತಕೂಟದ ಮೂಲಕ ಮುಂದಿನ ದಿನಗಳಲ್ಲಿ ಬ್ಯಾಂಕಿನ ವ್ಯವಹಾರ ಮನೆ-ಮನೆಗೂ ತಲುಪಲಿದೆ ಎಂದು ನಬಾರ್ಡ್ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ಪ್ರಕಾಶ್ಭಂಡಾರಿ ತಿಳಿಸಿದರು.ಇಲ್ಲಿನ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಗ್ರಾಹಕರ ಸಮಾವೇಶ’ದಲ್ಲಿ ಅವರು ಮಾತನಾಡಿದರು.ದೇಶದಲ್ಲಿ ಶೇ. 51ರಷ್ಟು ಜನರು ಬ್ಯಾಂಕಿನ ವ್ಯವಹಾರದಿಂದ ದೂರವಿದ್ದು, ಅಂತಹವರಿಗೆ ರೈತಕೂಟ ಮತ್ತು ಸ್ವ-ಸಹಾಯ ಸಂಘಗಳ ಮೂಲಕ ಸಂದೇಶ ನೀಡುವುದು ನಬಾರ್ಡ್ ಬ್ಯಾಂಕಿನ ಉದ್ದೇಶ.
ಕುರಿ ಸಾಕಾಣಿಕೆ, ಸಾವಯವ ಕೃಷಿ ಮತ್ತು ಕೃಷಿಯೇತರ ಕಸುಬುಗಳಿಗೆ ಶೇ. 25ಸಬ್ಸಿಡಿ ನೀಡಲಾಗುವುದು. ಗ್ರಾಹಕರು ಇದರ ಸದುಪಯೋಗಪಡೆದುಕೊಳ್ಳಲು ಸಲಹೆ ನೀಡಿದರು.
ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಆರ್.ಸಿ. ಪಾಟೀಲ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಮತ್ತು ಸಾಮಾಜಿಕ ಭದ್ರತೆ ಪಿಂಚಣಿ ಪಡೆಯುವಂತಹ ಫಲಾನುಭವಿಗಳಿಗೆ ಅನೂಕೂಲವಾಗಲು ಪ್ರಗತಿ ಗ್ರಾಮೀಣ ಬ್ಯಾಂಕ್ ಹಣವಿಲ್ಲದೇ ಖಾತೆ ತೆರೆಯುವ ಅವಕಾಶ ನೀಡಿದೆ ಎಂದರು.
ಜಿಲ್ಲಾ ಪ್ರಗತಿ ಗ್ರಾಮೀಣ ಬ್ಯಾಂಕ್ನ ಹಿರಿಯ ವ್ಯವಸ್ಥಾಪಕರಾದ ಶಿವಕುಮಾರ್ಸ್ವಾಮಿ, ಯೋಗೇಶ್ವರಪ್ಪ, ರಾಜೇಶ್ ಕುಮಾರ್, ನಾಗಣ್ಣ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಎ.ವಿ. ರಂಗಸ್ವಾಮಿ ಮಾತನಾಡಿದರು.ರಂಗಪ್ಪ, ಜೆಸಿಬಿ ವೀರಣ್ಣ, ಗಿರಿ, ನಂಜುಂಡೇಶ್ವರ, ತಿಪ್ಪೇಸ್ವಾಮಿ. ರಾಮಚಂದ್ರಪ್ಪ, ಪುಟ್ಟಕೆಂಚಮ್ಮ ಮತ್ತಿತರರು ಹಾಜರಿದ್ದರು.
ಹೊಟ್ಟೆನೋವು ತಾಳಲಾರದೇ ಆತ್ಮಹತ್ಯೆ
ಧರ್ಮಪುರ: ಹೊಟ್ಟೆನೋವು ತಾಳಲಾರದೇ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಶ್ರವಣಗೆರೆಯಲ್ಲಿ ಗುರುವಾರ ನಡೆದಿದೆ.
ಮೃತನನ್ನು ಗೋವಿಂದಪ್ಪ (65) ಎಂದು ಗುರುತಿಸಲಾಗಿದೆ. ಗೋವಿಂದಪ್ಪ ಹೊಟ್ಟೆನೋವು ತಾಳಲಾರದೇ ತಮ್ಮ ಜಮೀನಿನಲ್ಲಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಮೀಪದ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.