ಗದಗ: ಬೆಟಗೇರಿಯ ಗಾಂಧಿ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕ ಮತ್ತು ಬಾಲಕಿಯರ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಮೈಸೂರು ಮತ್ತು ಕೊಡಗು ತಂಡಗಳು ವಿಜಯಶಾಲಿಯಾದವು.
ರೋಚಕತೆಯಿಂದ ಕೂಡಿದ್ದ ಬಾಲಕರ ಫೈನಲ್ ಪಂದ್ಯದಲ್ಲಿ ಮೈಸೂರು ತಂಡವನ್ನು ಧಾರವಾಡ ತಂಡ ಸೋಲಿಸಿತು. ಅದೇ ರೀತಿ ಕೊಡಗು ತಂಡದ ಕ್ರೀಡಾಪಟಗಳು ಉತ್ತಮ ಪ್ರದರ್ಶನ ನೀಡಿ ಉಡುಪಿ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾದರು. ಧಾರವಾಡದ ಬಾಲಕರ ಹಾಗೂ ಕೊಡಗು ಬಾಲಕಿಯರ ತಂಡ ದೆಹಲಿ ಹಾಗೂ ಹಿಮಾಚಲ ಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ಬುಧವಾರ ನಡೆದ ಬಾಲಕರ ಕ್ವಾರ್ಟರ್ ಫೈನಲ್ನಲ್ಲಿ ಕೊಡಗು ವಿರುದ್ಧ ಬೆಂಗಳೂರು ಉತ್ತರ, ಚಿಕ್ಕಬಳ್ಳಾಪೂರ ವಿರುದ್ಧ ಮೈಸೂರು, ಮಂಡ್ಯ ವಿರುದ್ಧ ಧಾರವಾಡ, ಬೆಳಗಾವಿ ವಿರುದ್ಧ ಚಿತ್ರದುರ್ಗ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದವು. ಸೆಮಿಫೈನಲ್ನಲ್ಲಿ ಮೈಸೂರು ತಂಡ ಬೆಂಗಳೂರು ಉತ್ತರವನ್ನು ಮತ್ತು ಧಾರವಾಡ ತಂಡ ಚಿತ್ರದುರ್ಗವನ್ನು ಸೋಲಿಸಿ ಫೈನಲ್ ಪ್ರವೇಶಿಸಿದವು.
ಬಾಲಕಿಯರ ಕ್ವಾಟರ್ ಫೈನಲ್ನಲ್ಲಿ ಬಳ್ಳಾರಿ ವಿರುದ್ಧ ಉಡುಪಿ, ಹಾಸನ ವಿರುದ್ಧ ಬೆಳಗಾವಿ, ಮೈಸೂರು ವಿರುದ್ಧ ಬೆಂಗಳೂರು ಉತ್ತರ, ಮಂಡ್ಯ ವಿರುದ್ಧ ಕೊಡಗು ವಿಜಯ ಸಾಧಿಸಿದವು. ಬಾಲಕಿಯರ ಫೈನಲ್ನಲ್ಲಿ ಕೊಡಗು ತಂಡದ ಆಟಗಾರರು ಮಿಂಚಿನ ಓಟದಿಂದ ಉಡುಪಿಯನ್ನು ಸೋಲಿಸಿದರು. ಕ್ರೀಡಾಪಟಗಳ ಬಿರುಸಿನ ಓಟ, ಬಾಲ್ ಬೀಸಾಟ ಪ್ರೇಕ್ಷಕರನ್ನು ರಂಜಿಸಿತು.
ಬಹುಮಾನ ವಿತರಣೆ: ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ. ಎಸ್. ಗೌಡರ ಬಹುಮಾನ ವಿತರಿಸಿದರು. ವಿಜಯಿ ತಂಡಗಳು ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯಕ್ಕೆ ಕೀರ್ತಿ ತರಬೇಕು ಎಂದರು.
ನಗರಸಭಾ ಸದಸ್ಯ ಸುರೇಶ ಕಟ್ಟಿಮನಿ ಪಾರಿತೋಷಕ ವಿತರಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಸಿ.ಆರ್. ಕರಿರಾಯನಗೌಡರ ನಿರೂಪಿಸಿದರು.
ಹನುಮನ್ ಬ್ಲೇಸಿಂಗ್ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ಜಿ. ವಿ. ಬಾಗಡೆ, ನಗರಸಭಾ ಸದಸ್ಯೆ ಪನ್ನಾಬಾಯಿ ಬಾಗಡೆ, ವಾಯ್. ಜಿ. ಗಡಾದ ವ್ಹಿ. ಎನ್. ಮರೆಗುದ್ದಿ, ನಿರ್ಣಯಕರಾದ ಸತರೆಡ್ಡಿ, ಅಶ್ವಿನಕುಮಾರ, ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶಂಕರ, ಪ್ರಾಚಾರ್ಯ ಹೊಳಿಯಪ್ಪ ಯಲಬುರ್ಗಾ, ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ, ಪ್ರಾಚಾರ್ಯ ಎಂ.ಸಿ. ಕಟ್ಟಿಮನಿ, ಆರ್. ಎಸ್. ಪಾಟೀಲ, ಬಿ. ಎಚ್. ಗರಡಿಮನಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.