ಧಾರವಾಡ: ಇಲ್ಲಿನ ರಂಗಾಯಣ ನಿರ್ದೇಶಕರಾಗಿದ್ದ ಸುಭಾಷ ನರೇಂದ್ರ ರಾಜ್ಯ ಸರ್ಕಾರದ ಸೂಚನೆ ಅನುಸಾರ ಶನಿವಾರ ರಾಜೀನಾಮೆ ನೀಡಿದರು.
ಸಾರ್ವಜನಿಕರಿಂದ ರಂಗ ಕೃತಿಗಳನ್ನು ರಂಗಾಯಣಕ್ಕಾಗಿ ಸಂಗ್ರಹಿಸುವ `ರಂಗ ಗ್ರಂಥಾಯಣ' ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ರಾಜೀನಾಮೆ ನೀಡಿರುವುದಾಗಿ ತಿಳಿಸಿದರು. ಫ್ಯಾಕ್ಸ್ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿರುವುದಾಗಿ ಹೇಳಿದರು.
`ಧಾರವಾಡ ರಂಗಾಯಣದ ಮೊದಲ ನಿರ್ದೇಶಕ ಏಣಗಿ ನಟರಾಜ ಅವರು ಹಾಕಿಕೊಂಡಿದ್ದ ಹಲವು ಯೋಜನೆಗಳನ್ನು ಮುಂದುವರೆಸಿದ್ದೇನೆ. ಅದಲ್ಲದೇ, ಶಿಕ್ಷಕರು, ವಿದ್ಯಾರ್ಥಿಗಳು, ಅಂಗವಿಕಲ ಮಕ್ಕಳಿಗೆ ರಂಗ ತರಬೇತಿ ನೀಡುವ ಕಾರ್ಯ ನಡೆಯಿತು. ವೃತ್ತಿ ನಾಟಕ ಕಂಪೆನಿಗಳನ್ನು ಕರೆದುಕೊಂಡು ವಿವಿಧ ಗ್ರಾಮಗಳಲ್ಲಿ ಅವುಗಳ ಪ್ರದರ್ಶನ ಏರ್ಪಡಿಸಲಾಯಿತು. ರಂಗಾಯಣವನ್ನು ಒಂದು ರೆಪರ್ಟರಿಯನ್ನಾಗಿ ರೂಪಿಸುವ ಸಂಬಂಧ ಕಲಾವಿದರ ಆಯ್ಕೆಗೂ ಚಾಲನೆ ನೀಡಿದ್ದೆ' ಎಂದು ಸುಭಾಷ ತಿಳಿಸಿದರು.