ಬೆಂಗಳೂರು: ‘ರಾಜ್ಯದಲ್ಲಿ ಚರ್ಚ್ ಮೇಲಿನ ದಾಳಿಯಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಬೇಕಿದ್ದು, ಸರ್ಕಾರವು ಧಾರ್ಮಿಕ ಸ್ಥಳಗಳ ಪಾವಿತ್ರ್ಯಕ್ಕೆ ಚ್ಯುತಿ ಬರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ’ ಎಂದು ರಾಜ್ಯಪಾಲ ಎಚ್.ಆರ್.ಭಾರ ದ್ವಾಜ್ ಹೇಳಿದರು.
ಟಿ.ಜಾನ್ ಸಮೂಹ ಶಿಕ್ಷಣ ಸಂಸ್ಥೆ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ‘ಆಳುವ ವರ್ಗವು ಶೈಕ್ಷಣಿಕ ಮತ್ತು ವೈಚಾರಿಕತೆಯ ದೃಷ್ಟಿಯಿಂದ ಉತ್ತಮವಾಗಿರಬೇಕು ಆಗ ಮಾತ್ರ ಸದೃಢ ದೇಶವನ್ನು ಕಟ್ಟಲು ಸಾಧ್ಯ’ ಎಂದರು.
ಮುಂಬರುವ ದಿನಗಳಲ್ಲಿನ ಹೊಸ ಸವಾಲುಗಳನ್ನು ಎದುರಿಸಲು ದೇಶ ಸನ್ನದ್ಧವಾಗಬೇಕಿದೆ. ಈ ನಿಟ್ಟಿನಲ್ಲಿ ಯುವಜನತೆ ಸಕ್ರಿಯವಾಗಿ ತೊಡಗಿಕೊಳ್ಳಬೇಕು. ಶಿಕ್ಷಣ ಸಂಸ್ಥೆ ನಡೆಸುವವರು ಇಂದಿನ ಶಿಕ್ಷಣ ಯಾವ ಬಗೆಯ ನೈತಿಕ ಮೌಲ್ಯಗಳನ್ನು ತಿಳಿಸಿಕೊಡುತ್ತಿದೆ ಎಂಬುದರ ಕುರಿತು ಪುನರಾವಲೋಕನ ಮಾಡಿಕೊಳ್ಳಬೇಕು’ ಎಂದು ಭಾರದ್ವಾಜ್ ಅವರು ಅಭಿಪ್ರಾಯಪಟ್ಟರು.‘ಶಿಕ್ಷಣ ಸಂಸ್ಥೆಗಳು ಎಲ್ಲಾ ಧಾರ್ಮಿಕ ನಂಬಿಕೆಗಳಿಗೆ ಗೌರವ ನೀಡುವ ಗುಣವನ್ನು ಬೆಳೆಸುವುದರೊಂದಿಗೆ ಮಾನವೀಯ ಮೌಲ್ಯಗಳನ್ನು ಬೋಧಿಸಬೇಕಿದೆ’ ಎಂದರು.
ವಿಧಾನ ಪರಿಷತ್ತಿನ ಸದಸ್ಯರೂ ಆದ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಟಿ.ಜಾನ್ ಅವರು ಮಾತನಾಡಿ, ‘ಶೈಕ್ಷಣಿಕ ಚಟುವಟಿಕೆಗಳು ಎಂದಿಗೂ ಹೊರೆಯಾಗಬಾರದು’ ಎಂದು ತಿಳಿಸಿದರು. ನಿವೃತ್ತ ಕಮಾಂಡಿಂಗ್ ಅಧಿಕಾರಿಗಳಾದ ಡೇವಿಡ್ ಯೂಹನ್, ಸಾಂಬಶಿವ ಉಪಸ್ಥಿತರಿದ್ದರು.