ನವದೆಹಲಿ (ಪಿಟಿಐ): ರತನ್ ಟಾಟಾ ಮತ್ತು ಕಾರ್ಪೊರೇಟ್ ಮಧ್ಯವರ್ತಿ ನೀರಾ ರಾಡಿಯಾ ಅವರ ನಡುವಿನ ಸಂಭಾಷಣೆಯ ಧ್ವನಿಮುದ್ರಿಕೆ ಸೋರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಲು ಆದೇಶಿಸಲಾಗಿದೆ ಎಂದು ಮಂಗಳವಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಇಂತಹ ಮಹತ್ವದ ಮಾಹಿತಿ ಸೋರಿಕೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ವಿಚಾರಣೆಗೆ ಆದೇಶಿಸಲಾಗಿದೆ ಎಂದು ಆದಾಯ ತೆರಿಗೆ ಹೆಚ್ಚುವರಿ ನಿರ್ದೇಶಕರ (ತನಿಖೆ) ಪರವಾಗಿ ಸಲ್ಲಿಸಲಾಗಿರುವ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
ಕೋರ್ಟಿನಲ್ಲಿ ತಾವು ಸಲ್ಲಿಸಿರುವ ಅರ್ಜಿಯ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂಬ ಟಾಟಾ ಅವರ ಆಪಾದನೆಯನ್ನು ಪ್ರಮಾಣ ಪತ್ರದಲ್ಲಿ ಅಲ್ಲಗಳೆಯಲಾಗಿದೆ. ಧ್ವನಿಮುದ್ರಿಕೆಯನ್ನು ಮುಕ್ತವಾಗಿ ಹಂಚಲಾಗಿದೆ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳಲಾಗಿದೆ ಎಂದು ಟಾಟಾ ಅವರು ತಮ್ಮ ಅರ್ಜಿಯಲ್ಲಿ ದೂರಿದ್ದು, ಸರ್ಕಾರ ಇದನ್ನು ನಿರಾಕರಿಸಿದೆ.