ಲಖನೌ (ಐಎಎನ್ಎಸ್): ಡಾ. ಜಾಕೀರ್ ಹುಸೇನ್ ಟ್ರಸ್ಟ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ವಿರುದ್ಧ ಮತ್ತಷ್ಟು ಸಾಕ್ಷ್ಯಗಳನ್ನು ನವೆಂಬರ್ 1 ರಂದು ಬಿಡುಗಡೆ ಮಾಡುವುದಾಗಿ ಭ್ರಷ್ಟಾಚಾರ ವಿರೋಧಿ ಭಾರತ (ಐಎಸಿ)ಶನಿವಾರ ತಿಳಿಸಿದೆ.
ಡಾ. ಜಾಕೀರ್ ಹುಸೇನ್ ಟ್ರಸ್ಟ್ ಅಡಿಯಲ್ಲಿ 17 ಕ್ಯಾಂಪ್ಗಳ ಮೂಲಕ ಅಂಗವಿಕಲ ಫಲಾನುಭವಿಗಳಿಗೆ ವಿತರಿಸಿರುವ ಸಲಕರಣೆಗಳ ಮಾಹಿತಿ ಇರುವ ಪರಿಷ್ಕೃತ ಪಟ್ಟಿಯನ್ನು ನವೆಂಬರ್ 1 ರಂದು ಉತ್ತರ ಪ್ರದೇಶದ ಫರೂಕಾಬಾದ್ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಭ್ರಷ್ಟಾಚಾರ ವಿರೋಧಿ ಭಾರತ ಸಂಘಟನೆಯ ಹಿರಿಯ ಕಾರ್ಯಕರ್ತ ಸಂಜಯ್ ಸಿಂಗ್ ತಿಳಿಸಿದ್ದಾರೆ.
ಅದೇ ದಿನ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಒಂದು ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿಭಟನಾ ಪ್ರದರ್ಶನವನ್ನು ಹತ್ತಿಕ್ಕಲು ಮುಂದಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಸಿಂಗ್ ಎಚ್ಚರಿಸಿದ್ದಾರೆ.