ಬಳ್ಳಾರಿ: ಸೋಮವಾರ ಚಂಚಲಗುಡ ಕಾರಾಗೃಹಕ್ಕೆ ತೆರಳಿ, ಬಂಧಿತ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಉಪ ಚುನಾವಣೆಯಲ್ಲಿ ಸ್ಫರ್ಧಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ನಗರದಲ್ಲಿ ಶನಿವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಂತ್ರವಾಗಿ ಸ್ಫರ್ಧಿಸುವಂತೆ ಕೆಲವು ಬೆಂಬಲಿಗರು, ಬಿಜೆಪಿಯಿಂದಲೇ ಸ್ಫರ್ಧಿಸುವಂತೆ ಇನ್ನು ಕೆಲವು ಬೆಂಬಲಿಗರು ಸಲಹೆ ನೀಡಿದ್ದಾರೆ. ನಗರಕ್ಕೆ ಇದೇ 6ರಂದು ಬಿಜೆಪಿ ವೀಕ್ಷಕರು ಭೇಟಿ ನೀಡಲಿದ್ದು, ಅವರೊಂದಿಗೆ ಹಾಗೂ ಗ್ರಾಮೀಣ ಪ್ರದೇಶದ ಜನರೊಂದಿಗೆ ಇನ್ನೂ ಒಂದು ಸುತ್ತು ಚರ್ಚಿಸಿದ ಬಳಿಕ ಪಕ್ಷದಿಂದ ಅಥವಾ ಸ್ವತಂತ್ರವಾಗಿ ಸ್ಫರ್ಧಿಸುವ ಕುರಿತು ಆಲೋಚಿಸಲಾಗುವುದು ಎಂದೂ ಅವರು ಹೇಳಿದರು.
~ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವುದಕ್ಕೆ ಸಾಕಷ್ಟು ಶ್ರವಿಸಿದ್ದರೂ, ಬಿಜೆಪಿಯಿಂದ ತೀವ್ರ ತೊಂದರೆ ಎದುರಾಗಿದೆ. ಆ ಪಕ್ಷದಿಂದ ಸ್ಫರ್ಧೆ ಬೇಡ~ ಎಂಬ ಸಲಹೆಯನ್ನು ಅನೇಕರು ನೀಡಿದ್ದಾರೆ. ಯಾವುದಕ್ಕೂ ರೆಡ್ಡಿ ಅವರೊಂದಿಗೆ ಚರ್ಚಿಸಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.ನ. 9 ಅಥವಾ 11ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.