ಲಕ್ಷ್ಮೇಶ್ವರ: ಅಂಗವಿಕಲರಿಗೆ ಸೂಕ್ತ ಪ್ರೋತ್ಸಾಹ ದೊರೆತರೆ ಅವರೂ ಉತ್ತಮ ಬದುಕು ನಡೆಸಬಲ್ಲರು ಎಂಬುದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಂಗನವಾಡಿಯ ಸೂರಣಗಿ ಎ ವಲಯದ ಮೇಲ್ವಿಚಾರಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷ್ಮೇಶ್ವರ ನಿವಾಸಿ ನಂದಾ ಕಾಶಿನಾಥ ನವಲೆ ನಿದರ್ಶನ.
ಹುಟ್ಟಿನಿಂದಲೇ ಒಂದು ಕಾಲು ಹಾಗೂ ಒಂದು ಕೈ ಊನವಾಗಿತ್ತು. ಕಡುಬಡತನ ಇದ್ದರೂ ಪಾಲಕರು ಚಿಕಿತ್ಸೆ ಕೊಡಿಸಲು ಸಾಲ ಮಾಡಿದರು. ಆದರೂ ಸಹ ಗುಣಮುಖರಾಗಲಿಲ್ಲ. ಪಾಲಕರು ಧೃತಿಗೆಡದೆ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಲು ನಿರ್ಧರಿಸಿದರು. ಸಹೋದರರು ಹಾಗೂ ತಂದೆ ತಾಯಿ ಪ್ರೋತ್ಸಾಹದಿಂದಾಗಿ ನಂದಾ ನವಲೆ ಅಂಗವೈಕಲ್ಯತೆ ಮೆಟ್ಟುನಿಂತು ಮಾದರಿ ಜೀವನ ನಡೆಸುತ್ತಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಪೂರೈಸಿರುವ ನವಲೆ ಅವರು ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ತಾಯಿ ಪಾರ್ವತಿ ಮಕ್ಕಳಗ ಬಳಗದ ಶಿಕ್ಷಣ ಸಂಸ್ಥೆಯಲ್ಲಿ ಪಡೆದರು, ಬಿ.ಎ. ಪದವಿಯನ್ನು ಉರಸಭೆ ಕಲಾ ಮಹಾವಿದ್ಯಾಲಯದಿಂದ ಪಡೆದುಕೊಂಡರು.
ನಂತರ ದೂರಶಿಕ್ಷಣ ಮೂಲಕ ಎಂಎ ಪದವಿ ಪೂರೈಸಿದರು. 2004ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕರ ಹುದ್ದಗೆ ಅರ್ಜಿ ಕರೆದಿದ್ದರು. ಅರ್ಜಿ ಹಾಕಲು ಹಣ ಇರಲಿಲ್ಲ. ‘ಅರ್ಜಿಯನ್ನು ಕೋರಿಯರ್ ಮೂಲಕ ಕಳುಹಿಸಲು ಆಗ ನನ್ನ ಹತ್ರ ಹಣ ಇರಲಿಲ್ಲ. ತಾಯಿ ಮಣ್ಣಿನ ಕುಡಿಕೆ ಒಡೆದು ಕೂಡಿಟ್ಟಿದ್ದ ಹಣವನ್ನು ನೀಡಿದರು’ ಎನ್ನುವ ನಂದಾ, ‘ನನ್ನೆಲ್ಲ ಬೆಳವಣಿಗೆಗೆ ಅಣ್ಣ ಕಿರಣ ಸಹಾಯ ಮಾಡಿದ್ದಾರೆ’ ಎಂದು ಹೃದಯ ತುಂಬಿ ಹೇಳುತ್ತಾರೆ.
‘ಅಂಗವಿಕಲೆ ಅಲ್ಲ ಅನ್ನುವ ಭಾವನೆ ನನ್ನ ತಂಗಿ ಮನಸ್ಸಿನಲ್ಲಿ ಮೂಡಬಾರದು. ಅವಳಿಗೆ ಶಿಕ್ಷಣ ಕೊಡಿಸುವ ಮೂಲಕ ಅವಳಿಗೆ ಉತ್ತಮ ಜೀವನ ಒದಗಿಸಿಕೊಡಬೇಕು ಎಂಬ ಉದ್ದೇಶದಿಂದ ಅವಳಿಗೆ ಶಿಕ್ಷಣ ಕೊಡಿಸಿದೆವು. ಇಂದು ಅವಳು ತನ್ನ ಬದುಕು ರೂಪಿಸಿಕೊಂಡಿರುಉದು ಪಟ್ಟ ಪರಿಶ್ರಮ ಸಾರ್ಥಕವಾಗಿದೆ’ ಎಂದು ನಂದಾ ಅವರ ಸಹೋದರ ಕಿರಣ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.