ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿ ರಥೋತ್ಸವದಲ್ಲಿ ಮಿಂದ ಭಕ್ತರು

Last Updated 22 ಫೆಬ್ರುವರಿ 2012, 8:50 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದ ಜನಸಾಗರ, ನೂಕುನುಗ್ಗಿನಲ್ಲೂ ಸಂಭ್ರಮ- ಸಡಗರ. ಬೃಹತ್ ಪುಷ್ಕರಣಿಯಲ್ಲಿ ಮಿಂದ ಸಮಾಧಾನ, ದೇವರ ದರ್ಶನಕ್ಕಾಗಿ ಹಾತೊರೆಯುತ್ತಿದ್ದ ಜನ. ಮಂಗಳವಾರ ತಾಲ್ಲೂಕಿನ ನಂದಿ ಗ್ರಾಮದ ಭೋಗನಂದೀಶ್ವರ ಬ್ರಹ್ಮರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಸಾಂಗವಾಗಿ ನೆರವೇರಿತು.

ಎಷ್ಟೇ ಗಂಟೆಗಳಾಗಲಿ ಅಥವಾ ಸಮಯ ಕಳೆಯಲಿ, ದೇಗುಲದಲ್ಲಿ ಸ್ವಲ್ಪ ಹೊತ್ತು ತಂಗಿ ದರೇನೆ ನೆಮ್ಮದಿ. ಅಲ್ಲಿನ ಇಡೀ ದೇಗುಲವು ಹಲವು ವೈಶಿಷ್ಟ್ಯತೆಗಳಿಂದ ಕಳೆಕಟ್ಟಿತ್ತು.

ಉಮಾಮಹೇಶ್ವರ-ವಿಘ್ನೇಶ್ವರ ರಥ ಮತ್ತು ಅರುಣಾಚಲೇಶ್ವರ ರಥವನ್ನು ಎಳೆಯುವ ಕಾರ್ಯಕ್ರಮ ಮಧ್ಯಾಹ್ನ 12ಕ್ಕೆ ನಿಗದಿ ಯಾಗಿದ್ದರೂ ಬೆಳಿಗ್ಗೆಯಿಂದಲೇ ಜನರು ಸಹ ಸ್ರಾರು ಸಂಖ್ಯೆಯಲ್ಲಿ ಭೋಗನಂದೀಶ್ವರ ದೇವಾ ಲಯಕ್ಕೆ ಬರತೊಡಗಿದರು. ದೇವಾಲಯ ಪ್ರವೇಶಿಸಲು ಮುಖ್ಯ ಪ್ರವೇಶದ್ವಾರ ಮತ್ತು ಕಿರಿದಾದ ದ್ವಾರದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೂ ಸಂಜೆಯವರೆಗೆ ಸಾಗರೋಪಾದಿಯಲ್ಲಿ ಜನರು ಬರುತ್ತಿದ್ದ ಕಾರಣ ಪ್ರವೇಶದ್ವಾರಗಳಲ್ಲಿ ನೂಕು ನುಗ್ಗಲು ಉಂಟಾಯಿತು.

ತೇರು ಎಳೆಯುವ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಬಾರದು ಎಂದು ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು. ಮುಂಜಾಗ್ರತಾ ಕ್ರಮದ ರೂಪದಲ್ಲಿ ಪೊಲೀಸ್ ಸಿಬ್ಬಂದಿಗಳೇ ಹಗ್ಗವನ್ನು ಹಿಡಿದುಕೊಂಡು ರಥವನ್ನು ಸುತ್ತುವರೆದಿದ್ದರು. ತೇರು ಎಳೆಯುವವರನ್ನು ಹೊರತುಪಡಿಸಿದರೆ, ಇತರ ಭಕ್ತಾದಿಗಳು ನುಸುಳದಂತೆ ತಡೆಹಿಡಿದರು. ರಥಗಳ ಚಕ್ರಗಳೆಡೆಗೆ ವಿಶೇಷ ಗಮನ ನೀಡಿದ ಪೊಲೀಸರು ಅವುಗಳತ್ತ ಯಾರೂ ಬರದಂತೆ ನಿಗಾ ವಹಿಸಿದರು.

ಎರಡೂ ರಥಗಳನ್ನು ಸರಪಳಿ ಮತ್ತು ಹಗ್ಗದ ನೆರವಿನಿಂದ ಎಳೆಯುವುದನ್ನು ಆರಂಭಿಸಿದ ಕೂಡಲೇ ಭಕ್ತಾದಿಗಳು ರಥಗಳತ್ತ ಬಾಳೆಹಣ್ಣು ಎಸೆದು ಭಕ್ತಿಯನ್ನು ಸಮರ್ಪಿಸಿತೊಡಗಿದರು. ರಥ ಸಾಗಿದಂತೆಲ್ಲ ರಸ್ತೆಬದಿಯಲ್ಲಿ ಬೀಳುತ್ತಿದ್ದ ಬಾಳೆಹಣ್ಣುಗಳನ್ನು ದೇವರಪ್ರಸಾದವೆಂದು ಕಿರಿಯರು ಮತ್ತು ಹಿರಿಯರು ಸಂಗ್ರಹಿಸುತ್ತಿದ್ದರು. ಎರಡೂ ರಥಗಳು ದೇಗುಲದ ಹೊರ ಆವರಣವನ್ನು ಸಂಪೂರ್ಣವಾಗಿ ಸುತ್ತು ಹಾಕಿಕೊಂಡು ಬರುವ ವೇಳೆಗೆ ಸಂಜೆಯಾಗಿತ್ತು. ಆಗ ದೇಗುಲದ ಸುತ್ತಮುತ್ತ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು.

ರಥಗಳತ್ತ ಬಳಿ ಬಂದು ಬಾಳೆಹಣ್ಣುಗಳನ್ನು ಸಮರ್ಪಿಸುತ್ತೇವೆ. ನಮ್ಮ ಭಾಗದಲ್ಲಿ ಇದು ಬೃಹತ್ ಜಾತ್ರೆ. ದೇವನಹಳ್ಳಿ, ಕೋಲಾರ, ಚಿಂತಾಮಣಿ ತಾಲ್ಲೂಕಿನಿಂದ ಮಾತ್ರವಲ್ಲದೇ ಆಂಧ್ರಪ್ರದೇಶದಿಂದಲೂ ಭಕ್ತರು ಬರುತ್ತಾರೆ  ಗ್ರಾಮಸ್ಥರು ಹೇಳಿದರು.

`ಪ್ರತಿ ವರ್ಷ ಜಾತ್ರೆಗೆ ತಪ್ಪದೇ ಬರುತ್ತೇವೆ. ಎಷ್ಟೇ ಉದ್ದನೆಯ ಸಾಲಿದ್ದರೂ ದೇವರ ದರ್ಶನ ಪಡೆದ ನಂತರವಷ್ಟೇ ಜಾತ್ರೆಯಲ್ಲಿ ಪಾಲ್ಗೊ ಳ್ಳುತ್ತೇವೆ. ನಂತರ ಬೃಹತ್ ಪುಷ್ಕರಣಿಗೆ ತೆರಳಿ ಸ್ನಾನ ಮಾಡುತ್ತೇವೆ~ ಎಂದು ಉದ್ಯಮಿ ವಿಜಯಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ಶಾಸಕ ಕೆ.ಪಿ.ಬಚ್ಚೇಗೌಡ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮತ್ತಿತರರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ದೇವಾಲಯದ ಆವರಣದಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದ ಮತ್ತು ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ಜಾತ್ರೆಗೆಂದೇ ಕೆಎಸ್‌ಆರ್‌ಟಿಸಿ ವತಿಯಿಂದ ವಿಶೇಷ ಬಸ್‌ಗಳ ಸೌಲಭ್ಯ ಕಲ್ಪಿಸಲಾಗಿದ್ದರೂ ಜನರು ಆಟೋರಿಕ್ಷಾಗಳಲ್ಲಿ, ಖಾಸಗಿ ವಾಹನಗಳಲ್ಲಿ, ಮಿನಿ ಲಾರಿಗಳಲ್ಲಿ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಆಗಮಿಸುತ್ತಿದ್ದರು.

ಪಾನಕ ವಿತರಣೆ, ಅನ್ನಸಂತರ್ಪಣೆ: ತಾಲ್ಲೂಕಿನ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯದ ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ದೇವಾಲಯದ ಹೊರ ಆವರಣದಲ್ಲಿ ಪಾನಕ, ಮಜ್ಜಿಗೆ ವಿತರಣೆ ಮತ್ತು ಅನ್ನಸಂತರ್ಪಣೆ ಮಾಡಲಾಗುತಿತ್ತು. ಬಿಸಿಲಿನ ಬೇಗೆಯಿಂದ ಸುಸ್ತಾಗಿದ್ದ ಬಹುತೇಕ ಮಂದಿ ಪಾನಕ, ಮಜ್ಜಿಗೆ ಸವಿದು ಬಾಯಾರಿಸಿಕೊಂಡರು. ಅನ್ನಸಂತರ್ಪಣೆ ಕೇಂದ್ರಕ್ಕೆ ತೆರಳಿ ಊಟ ಮಾಡಿದರು.

ಪಾನಕ, ಮಜ್ಜಿಗೆ ವಿತರಣೆ ಮತ್ತು ಅನ್ನಸಂತರ್ಪಣೆ ಮುಂತಾದವುಗಳಿಗೆ ತೊಂದರೆ ಆಗದಿರಲಿಯೆಂದು ಮೈದಾನದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ದಾನಿಗಳು ಬಾಟ್ಲಿ, ಬಟ್ಟಲು ಮುಂತಾದವುಗಳ ನೆರವಿನಿಂದ ಪಾನಕ, ಮಜ್ಜಿಗೆ ವಿತರಿಸುತ್ತಿದ್ದರು. ಬಾಳೆಎಲೆ ಮತ್ತು ತಟ್ಟೆಗಳಲ್ಲಿ ಊಟವನ್ನು ವಿತರಿಸಲಾಗುತಿತ್ತು.

`ದಾನಿಗಳು ಮತ್ತು ಸಾರ್ವಜನಿಕರು ನೀಡುವ ಧನಸಹಾಯದಿಂದಾಗಿ ಕಳೆದ 18 ವರ್ಷಗಳಿಂದ ಅನ್ನಸಂತರ್ಪಣೆ ಆಯೋಜಿಸುತ್ತಿದ್ದೇವೆ. ಶಿವರಾತ್ರಿ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದಿಂದ ಅವಲಕ್ಕಿ ಮತ್ತು ಉಪ್ಪಿಟ್ಟು ವಿತರಿಸಿದೆವು. ಜಾಗರಣೆ ಆಚರಿಸಿದ ಭಕ್ತಾದಿಗಳಿಗೆಲ್ಲ ರಾತ್ರಿಯಿಡೀ ಆಹಾರ ವಿತರಿಸಿದೆವು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡುವಲ್ಲಿ ಸಂತೃಪ್ತಿಯಿದೆ. ಶ್ರೀಕಾಂತ್ ಭಟ್ಟರ ನೇತೃತ್ವದಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸುತ್ತಿದ್ದೇವೆ~ ಎಂದು ಪ್ರೇಮಲೀಲಾ ವೆಂಕಟೇಶ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT