ಮೂಡಿಗೆರೆ: ತಾಲ್ಲೂಕಿನಾದ್ಯಂತ ಮಳೆ ಸ್ವಲ್ಪ ಬಿಡುವು ನೀಡುತ್ತಿರುವಂತೆ, ಕೃಷಿ ಚಟುಚಟಿಕೆ ಗರಿಗೆದರಿದ್ದು, ವರುಣನ ವಕ್ರದೃಷ್ಟಿಗೆ ಸಿಲುಕಿ ಅಳಿದುಳಿದ ಬೆಳೆಯನ್ನಾದರೂ ರಕ್ಷಿಸಿಕೊಳ್ಳೋಣ ಎಂಬ ಆತಂಕದಲ್ಲಿ ಗೊಬ್ಬರಕ್ಕಾಗಿ ಮುಗಿಬಿದ್ದ ಅನ್ನದಾತನಿಗೆ, ತಾನು ಖರೀದಿಸಿರುವುದು ನಕಲಿ ಗೊಬ್ಬರ ಎಂಬ ಶಂಕೆ ಮೂಡಲಾರಂಭಿಸಿದ್ದು, ಸಾಲ ಮಾಡಿ ಖರೀದಿಸಿದ ಗೊಬ್ಬರವನ್ನು ಬೆಳೆಗೆ ಹಾಕಲಾಗದೇ ಉಭಯ ಸಂಕಟಕ್ಕೆ ಸಿಲುಕಿ ಪರಿತಪಿಸುತ್ತಿದ್ದಾನೆ.
ತಾಲ್ಲೂಕಿನಲ್ಲಿ ಗೊಬ್ಬರಕ್ಕೆ ಬೇಡಿಕೆ ಹೆಚ್ಚುತ್ತಿದ್ದಂತೆ ಅವಕಾಶವನ್ನು ಬಳಸಿಕೊಂಡು ನಕಲಿಗೊಬ್ಬರವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಶಂಕೆಯನ್ನು ರೈತಾಪಿ ವರ್ಗ ವ್ಯಕ್ತಪಡಿಸಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಕಳೆದ ವಾರದಲ್ಲಿ ನಂದೀಪುರದ ರೈತ ಮಹೇಶ್ ಖರೀದಿಸಿದ ಮಿಕ್ಸರ್ 17;17:17 ಗೊಬ್ಬರದಲ್ಲಿ ತೂಕ ಹೆಚ್ಚಲೆಂದು ಮರಳನ್ನು ಮಿಶ್ರಣ ಮಾಡಲಾಗಿದೆ ಎಂಬ ದೂರು ನೀಡಿದ್ದು, ಅದೇ ಲೋಡ್ನಲ್ಲಿ ಖರೀದಿ ಮಾಡಿ, ಕಾಫಿ ತೋಟಕ್ಕೆ ಹರವಿದ ಗೊಬ್ಬರ ಕರಗಿಲ್ಲ ಎಂದು ಅನೇಕ ರೈತರು ಅಳಲು ತೋಡಿಕೊಂಡಿದ್ದರು.
ಕಳೆದ ಮೂರು ದಿನಗಳ ಹಿಂದೆ, ಪಟ್ಟಣದ ಸಹಕಾರ ಸಂಘದ ಮಾರಾಟ ಮಳಿಗೆಯಲ್ಲಿ ಖರೀದಿಸಿದ ದುಬಾರಿ ಬೆಲೆಯ ಪೊಟಾಶ್ ಗೊಬ್ಬರದಲ್ಲಿ, ಕಡಿಮೆ ಬೆಲೆಯ ಯೂರಿಯಾವನ್ನು ಮಿಶ್ರಣ ಮಾಡಲಾಗಿದೆ. ಉಪ್ಪಿನಂತಹ ಅಂಶವನ್ನು ಸೇರಿಸಲಾಗಿದೆ ಎಂದು ಅಧಿಕಾರಿಗಳ ಸಮ್ಮುಖದಲ್ಲಿಯೇ ಜರಡಿ ಹಿಡಿದು ಯೂರಿಯಾ ಇರುವುದನ್ನು ಪತ್ತೆ ಮಾಡಿ ತೋರಿಸಿದ ರೈತರು, ಸ್ಥಳದಲ್ಲಿ ಪ್ರತಿಭಟನೆಯನ್ನು ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಅಧಿಕಾರಿಗಳು ಸುಮಾರು 60 ಟನ್ ದಾಸ್ತಾನಿರುವ ಗೊಬ್ಬರವನ್ನು, ಪರೀಕ್ಷೆಯ ವರದಿ ಬರುವವರೆಗೂ ಮಾರಾಟ ಮಾಡದಂತೆ ತಡೆದಿದ್ದು, ಗೊಬ್ಬರದ ಸ್ಯಾಂಪಲ್ಲನ್ನು ಪರೀಕ್ಷೆಗಾಗಿ ಕಳುಹಿಸಿದ್ದಾರೆ.
ಕಡಿಮೆ ಬೆಲೆಯ ಗೊಬ್ಬರಗಳಾದ ಯೂರಿಯಾ, ಮಿಕ್ಸರ್ ಮುಂತಾದವುಗಳನ್ನು, 900 ರೂಪಾಯಿ ಬೆಲೆ ಹೊಂದಿರುವ ಪೊಟಾಶ್ನಂತಹ ಗೊಬ್ಬರಕ್ಕೆ ಬೆರೆಸಿ ಲಾಭ ಮಾಡುವುದು, ಮಿಕ್ಸರ್ ಗೊಬ್ಬರಕ್ಕೆ, ಮರಳು, ಮರದ ಹೊಟ್ಟು, ಉಪ್ಪು ಮುಂತಾದ ಪದಾರ್ಥಗಳನ್ನು ಸೇರಿಸುವುದು ಹೀಗೆ ನಾನಾ ಪ್ರಕಾರಗಳಲ್ಲಿ ನಕಲಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ದಂದೆಯಲ್ಲಿ ಕೆಲವು ಅಧಿಕಾರಿಗಳು, ಮಾರಾಟ ಮಳಿಗೆಯ ವ್ಯವಸ್ಥಾಪಕರ ಕೈವಾಡವೂ ಇರಬಹುದೆಂಬ ಅನುಮಾನ ರೈತವರ್ಗದಲ್ಲಿ ವ್ಯಕ್ತವಾಗಿದ್ದು, ಸತ್ಯಾಂಶ ಬಹಿರಂಗಗೊಳ್ಳಬೇಕಿದೆ.
ಗೊಬ್ಬರ ಗುಣಮಟ್ಟ ಪರೀಕ್ಷೆಗಾಗಿ ಮಂಗಳೂರಿನ ಬೆಳ್ತಂಗಡಿ ಮತ್ತು ಬೆಂಗಳೂರಿನಲ್ಲಿ ಸರ್ಕಾರಿ ಪ್ರಯೋಗಾಲಯವಿದ್ದು, ತಾಲ್ಲೂಕಿನಲ್ಲಿ ಯಾವುದೇ ನಕಲಿ ಗೊಬ್ಬರದ ದೂರು ಬಂದರೂ, ಈ ಕೇಂದ್ರಗಳಲ್ಲಿಯೇ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷಾ ಕೇಂದ್ರಗಳು ದೂರದಲ್ಲಿರುವುದರಿಂದ ಅಲ್ಲಿ ನಡೆಯುವ ಕರಾಮತ್ತುಗಳು ಸ್ಥಳೀಯ ರೈತರ ಅರಿವಿಗೇ ಬಾರದೇ, ಅಲ್ಲಿಂದ ಬರುವ `ಉತ್ತಮ ಗುಣಮಟ್ಟವಿದೆ' ಎಂಬ ಸರ್ಟಿಫಿಕೇಟ್ ಪ್ರದರ್ಶನ ನಡೆಸಿ ಮಾರಾಟ ಪ್ರಕ್ರಿಯೆ ಮುಂದುವರೆಸಲಾಗುತ್ತದೆ. ಈ ಪರೀಕ್ಷೆ ಎಂಬುದು ಅಧಿಕಾರಿಗಳು ಮತ್ತು ಕಂಪೆನಿಗಳು ಹಾಗೂ ಮಾರಾಟಗಾರರ ನಡುವಿನ ಹುನ್ನಾರ ಎಂಬುದು ಸ್ಥಳೀಯ ರೈತರ ಆರೋಪವಾಗಿದೆ.
ಗೊಬ್ಬರದ ಪ್ರತಿ ಲೋಡ್ ಅನ್ನೂ ಸ್ಯಾಂಪಲ್ ಪರೀಕ್ಷೆ ನಡೆಸಿ, ವಿತರಣೆ ಮಾಡಬೇಕೆಂಬ ನಿಯಮವಿದ್ದರೂ, ಅಧಿಕಾರಿಗಳ ಆಲಸ್ಯ ಮನೋಭಾವನೆಯಿಂದಾಗಿ, ನಿಯಮವನ್ನು ಗಾಳಿಗೆ ತೂರಿರುವುದು ನಕಲಿ ಗೊಬ್ಬರದ ಶಂಕೆ ಬಲವಾಗಲು ಕಾರಣವಾಗಿದೆ. ಮಲೆನಾಡಿನಲ್ಲಿ ತಾನು ಬೆಳೆದ ಬೆಳೆಯೆಲ್ಲವನ್ನೂ ಕಳೆದುಕೊಂಡಿರುವ ರೈತ, ಅಳಿದುಳಿದ ಬೆಳೆಯಾದರೂ ಉಳಿಯಲಿ ಎಂದು ಸಾಲಮಾಡಿ ಖರೀದಿಸುವ ಗೊಬ್ಬರವನ್ನಾದರೂ ಸೂಕ್ತವಾಗಿ ಒದಗಿಸಬೆಕು ಎಂಬುದು ರೈತರ ಒತ್ತಾಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.