ಬೆಳಗಾವಿ: ನಗರದಲ್ಲಿ ನಕಲಿ ಬಾಬಾಗಳ ಹಾವಳಿ ಹೆಚ್ಚಾಗಿದ್ದು, ಅವರ ವಿರುದ್ಧ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಮುಸ್ಲಿಂ ಸಮಾಜದ ಮುಖಂಡ ಆಜಾದ್ ಮುಲ್ಲಾ ಆಗ್ರಹಿಸಿದರು.
`ನಕಲಿ ಬಾಬಾಗಳ ವ್ಯವಹಾರವೇನು? ಅವರ ಎಷ್ಟು ಆಸ್ತಿ ಸಂಪಾದಿಸಿದ್ದಾರೆ ಎಂಬ ಬಗೆಗೆ ಪೊಲೀಸರು ತನಿಖೆ ನಡೆಸಬೇಕು. ಅವರ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು~ ಎಂದು ಅವರು ಒತ್ತಾಯಿಸಿದರು.
`ಕೊತ್ವಾಲಗಲ್ಲಿಯಲ್ಲಿ ಐದಕ್ಕೂ ಹೆಚ್ಚು ಬಾಬಾಗಳಿದ್ದಾರೆ. ನಗರದಲ್ಲಿ ನೂರಕ್ಕೂ ಹೆಚ್ಚಿದ್ದು, ಮೂಢನಂಬಿಕೆಗಳನ್ನು ಬೆಳೆಸುವ ಮೂಲಕ ಜನರನ್ನು ಭಾವನಾತ್ಮಕವಾಗಿ ಲೂಟಿ ಮಾಡುತ್ತಿದ್ದಾರೆ. ಕೆಲವರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ~ ಎಂದು ಅವರು ಆರೋಪಿಸಿದರು.
`ಇತ್ತೀಚೆಗೆ ಕೊತ್ವಾಲ್ಗಲ್ಲಿಯಲ್ಲಿ ನಡೆದ ಬಾಲಕನ ಕೊಲೆ ಪ್ರಕರಣದಲ್ಲಿ ಈ ನಕಲಿ ಬಾಬಾಗಳು ಕೈವಾಡವಿರುವ ಶಂಕೆ ಇದೆ. ಕೊಲೆಯಾದ ಬಾಲಕನ ನಾಲಿಗೆ ಕತ್ತರಿಸಿರುವುದು, ಮೈಮೇಲೆ ಅಲ್ಲಲ್ಲಿ ರಂಧ್ರಗಳನ್ನು ಕೊರೆದಿರುವುದು ನೋಡಿದರೆ ಮಾಟ ಮಾಡಿರಬಹುದು~ ಎಂದರು.
`ಕಳೆದ ಮೂರು ವರ್ಷದಲ್ಲಿ ಕೊತ್ವಾಲಗಲ್ಲಿಯಲ್ಲಿ ನಾಲ್ವರು ಕಾಣೆಯಾಗಿದ್ದಾರೆ. ಇವರ ಗತಿ ಏನಾಗಿದೆ ಎಂಬುದರ ಕುರಿತು ತನಿಖೆ ನಡೆಸಬೇಕು. ನಕಲಿ ಬಾಬಾಗಳ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು~ ಎಂದು ಸೋಮವಾರ ಸುದ್ದಿಗಾರರಿಗೆ ಅವರು ತಿಳಿಸಿದರು.
`ಬಾಬಾಗಳ ವಿರುದ್ಧ ಮಾತನಾಡಿದರೆ ಏನಾಗುತ್ತದೆಯೋ ಎಂಬ ಭಯದಿಂದ ಸಮಾಜದ ಬಹಳಷ್ಟು ಮುಖಂಡರು ಸುಮ್ಮನಿದ್ದಾರೆ. ಇವತ್ತು ಆ ಬಾಲಕನಿಗೆ ಆದ ಗತಿ ನಾಳೆ ನಮ್ಮ ಮಗುವಿಗೆ ಆಗುವುದಿಲ್ಲ ಎಂದು ಏನು ಗ್ಯಾರಂಟಿ. ಜೀವ ಭಯವಿದ್ದರೂ ನಕಲಿ ಬಾಬಾಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದೇನೆ~ ಎಂದು ಅವರು ಹೇಳಿದರು.
ಗೋಪಿ ಬಳ್ಳಾರಿ, ಮಹೇಂದ್ರ ಮಂಕಾಲೆ, ಸಾಧಿಕ್ ಮಿರ್ಜಾ ಮತ್ತಿತರರು ಹಾಜರಿದ್ದರು.