ನವದೆಹಲಿ (ಪಿಟಿಐ): ನಕಲಿರಕ್ಷಣಾ ಹಗರಣವೊಂದಕ್ಕೆ ಸಂಬಂಧಿಸಿದಂತೆ 2001ರಲ್ಲಿ ಒಂದು ಲಕ್ಷ ರೂಪಾಯಿ ಲಂಚ ಪಡೆದ ಪ್ರಕರಣವೊಂದರಲ್ಲಿ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯದಿಂದ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದ, ಬಿಜೆಪಿಯ ಮಾಜಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರಿಗೆ ಗುರುವಾರ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.
~ನನಗೆ ಈಗಾಗಲೇ ವಯಸ್ಸಾಗಿದ್ದು, ವಿವಿಧ ರೀತಿಯ ಆರೋಗ್ಯ ತೊಂದರೆಗಳನ್ನು ಅನುಭವಿಸುತ್ತಿದ್ದೇನೆ. ನನಗೆ ಜಾಮೀನು ನೀಡಬೇಕೆಂದು 72 ವರ್ಷದ ಲಕ್ಷ್ಮಣ್ ಅವರು ಸೆ. 4ರಂದು ದೆಹಲಿ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದರು.
ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ.ಎ.ಕೆ. ಪಾಠಕ್ ಅವರು ರೂ. 50 ಸಾವಿರ ವ್ಯೆಯಕ್ತಿಕ ಭದ್ರತಾ ಬಾಂಡ್ ಮೇಲೆ ಲಕ್ಷ್ಮಣ್ ಅವರಿಗೆ ಜಾಮೀನು ಮಂಜೂರು ಮಾಡಿದರು.
2001ರಲ್ಲಿ ತೆಹಲ್ಕಾ.ಕಾಮ್ ಸುದ್ದಿ ಸಂಸ್ಥೆಯು ನಡೆಸಿದ್ದ ರಹಸ್ಯ ಕಾರ್ಯಾಚರಣೆಯಲ್ಲಿ ಬಂಗಾರು ಲಕ್ಷ್ಮಣ್ ಹಣ ಪಡೆದುದನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿತ್ತು.
ಸೇನೆಗೆ ಥರ್ಮಲ್ ಬೈನಾಕ್ಯುಲರುಗಳನ್ನು ಸರಬರಾಜು ಮಾಡುವ ಗುತ್ತಿಗೆ ನೀಡುವಂತೆ ರಕ್ಷಣಾ ಸಚಿವಾಲಯಕ್ಕೆ ಶಿಫಾರಸು ಮಾಡುವ ಸಲುವಾಗಿ ನಕಲಿ ಶಸ್ತ್ತಾಸ್ತ್ರ ವ್ಯಾಪಾರಿಗಳಿಂದ ಪಕ್ಷದ ಕಚೇರಿಯ ತಮ್ಮ ಕೊಠಡಿಯಲ್ಲಿಯೇ ಲಕ್ಷ್ಮಣ್ ಈ ಹಣ ಪಡೆದಿದ್ದರು.
ಈ ವಿಡಿಯೋ ಸಿಡಿಗಳನ್ನು ಸುದ್ದಿ ಸಂಸ್ಥೆ 2001ರ ಏಪ್ರಿಲ್ 3ರಂದು ಬಿಡುಗಡೆ ಮಾಡಿತ್ತು. ಇದು ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿ ಬಂಗಾರು ಲಕ್ಷ್ಮಣ್ ಅವರು ಬಿಜೆಪಿ ಅಧ್ಯಕ್ಷ ಸ್ಥಾನ ತ್ಯಜಿಸಬೇಕಾಗಿ ಬಂದಿತ್ತು.