ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ದರ್ಜೆ ಗುಮಾಸ್ತ ಆಶ್ರಯ್ ಎಂಬಾತ ಇಲಾಖೆಯ ಉಪ ನಿರ್ದೇಶಕ ಈಶ್ವರಮೂರ್ತಿ ಅವರ ಸಹಿಯನ್ನು ನಕಲು ಮಾಡಿ ಬ್ಯಾಂಕ್ನಿಂದ ₨ 6.40 ಲಕ್ಷ ಡ್ರಾ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈಶ್ವರಮೂರ್ತಿ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಆಶ್ರಯ್, ಸೆ.21ರಂದು ಈ ಕೃತ್ಯ ಎಸಗಿದ್ದಾನೆ ಎಂದು ಮಲ್ಲೇಶ್ವರ ಪೊಲೀಸರು ತಿಳಿಸಿದ್ದಾರೆ.
ಈಶ್ವರಮೂರ್ತಿ, ತಮ್ಮ ಕಚೇರಿ ದೂರವಾಣಿಯ ಬಿಲ್ನ ಮೊತ್ತವನ್ನು ಪಾವತಿಸಲು ಆತನಿಗೆ ಬ್ಯಾಂಕ್ ಚೆಕ್ ಪುಸ್ತಕವನ್ನು ಕೊಟ್ಟಿದ್ದರು. ಆರೋಪಿಯು ಎರಡು ಚೆಕ್ಗಳಿಗೆ ಈಶ್ವರಮೂರ್ತಿ ಅವರ ಸಹಿಯನ್ನು ನಕಲು ಮಾಡಿ, ಕಾರ್ಪೊರೇಷನ್ ಬ್ಯಾಂಕ್ನ ಮಲ್ಲೇಶ್ವರ 18ನೇ ಮುಖ್ಯರಸ್ತೆ ಶಾಖೆಯಿಂದ ಹಣ ಡ್ರಾ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಈಶ್ವರಮೂರ್ತಿ ಮಂಗಳವಾರ ದೂರು ನೀಡಿದ್ದಾರೆ. ವಂಚನೆ, ನಂಬಿಕೆ ದ್ರೋಹ ಮತ್ತು ನಕಲಿ ಸಹಿ ಬಳಕೆ ಆರೋಪದ ಮೇಲೆ ಆಶ್ರಯ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಇಲಾಖಾ ತನಿಖೆ ನಡೆಸಿ ಆತನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.