ಮುಂಬೈ: ಮಾನವ ಹಕ್ಕು ಕಾರ್ಯಕರ್ತ ಅರುಣ್ ಫೆರೇರಾ ಅವರು ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರ ಒದಗಿಸಲು ವಿಫಲರಾದ ಪೊಲೀಸರಿಗೆ ಛೀಮಾರಿ ಹಾಕಿರುವ ಮುಂಬೈ ಹೈಕೋರ್ಟ್, ಅರುಣ್ ಅವರಿಗೆ ಜಾಮೀನು ನೀಡಿದೆ.
ಈ ಹಿನ್ನೆಲೆಯಲ್ಲಿ ನಾಗಪುರ ಕೇಂದ್ರ ಕಾರಾಗೃಹದಿಂದ ಬುಧವಾರ ಹೊರಬಂದ ಅರುಣ್, ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. `ನಾನು ಬಳಲಿದ್ದು, ಮನೆಗೆ ಹೋಗಲು ಬಯಸುತ್ತೇನೆ~ ಎಂದಷ್ಟೇ ಹೇಳಿದರು. 2007ರಿಂದಲೂ ಅವರು ಕಾರಾಗೃಹದಲ್ಲಿದ್ದರು.
ಇದೇ ವೇಳೆ, ಮಾನವ ಹಕ್ಕುಗಳನ್ನು ಉಲ್ಲಂಘಿಸಿ ಕಾರಣವಿಲ್ಲದೆ ತಮ್ಮನ್ನು ಬಂಧಿಸಿ ಮಾನಸಿಕ ಹಿಂಸೆ ನೀಡಿದ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಅವರು ಅರ್ಜಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.