ಬೆಂಗಳೂರು: ಹಲವು ತಿಂಗಳಿಂದ ಮಲೆನಾಡು ಭಾಗದಲ್ಲಿ ಸ್ತಬ್ದಗೊಂಡ ನಕ್ಸಲ್ ಚಟುವಟಿಕೆ ಮತ್ತೆ ಚುರುಕುಗೊಳ್ಳುವ ಲಕ್ಷಣಗಳು ಕಂಡು ಬಂದಿದ್ದು, ಸಂಘಟನೆ ಬಲಪಡಿಸುವತ್ತ ನಕ್ಸಲರು ಹೆಚ್ಚಿನ ಗಮನಹರಿಸಿದ್ದಾರೆ ಎಂಬ ಮಾಹಿತಿ ಬಂದಿದೆ.
ಮೂಡಿಗೆರೆ ತಾಲ್ಲೂಕಿನ ಮಾವಿನಹೊಲದಲ್ಲಿ ನಡೆದ ಎನ್ಕೌಂಟರ್ ಸಂದರ್ಭದಲ್ಲಿ ತೀವ್ರ ಗಾಯಗೊಂಡಿದ್ದ ಮುಜೇಖಾನ್ ಕನ್ಯಾಕುಮಾರಿ ಇದೀಗ ಚೇತರಿಸಿಕೊಳ್ಳುತ್ತಿದ್ದು ತಂಡಕ್ಕೆ ಮರಳಿದ್ದಾಳೆ ಎನ್ನಲಾಗಿದೆ. ರೋಗ ಉಲ್ಬಣಗೊಂಡು ಮೃತಪಟ್ಟಿದ್ದಾಳೆ ಎಂದು ಸುದ್ದಿಗೆ ಗ್ರಾಸಳಾಗಿದ್ದ ಹೊಸಗದ್ದೆ ಪ್ರಭಾ ಮತ್ತು ಅನಾರೋಗ್ಯದಿಂದ ನರಳುತ್ತಿದ್ದ ಬಿ.ಜಿ.ಕೃಷ್ಣಮೂರ್ತಿ ಸಹ ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದು, ತಂಡಕ್ಕೆ ಮರಳಿರುವುದು ಖಚಿತವಾಗಿದೆ.
ವಿಶೇಷ ಎಂದರೆ ಇದೀಗ ನಕ್ಸಲ್ ತಂಡ ಕಾಡಿನಲ್ಲಿ ಆಂಧ್ರಪ್ರದೇಶ ಮೂಲದ ವೈದ್ಯರೊಬ್ಬರನ್ನು ಜತೆಗಿಟ್ಟುಕೊಳ್ಳುವ ಮೂಲಕ ಅನಾರೋಗ್ಯಕ್ಕೊಳಗಾದ ಸದಸ್ಯರಿಗೆ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ.
ಪಶ್ಚಿಮ ಘಟ್ಟದ ಕಾಡಿನ ತಂಡವನ್ನು ಬಲಪಡಿಸುವ ನಿಟ್ಟಿನಲ್ಲಿ ಅಂಧ್ರಪ್ರದೇಶದ ಕೆಲ ಯುವಕರು ಮಲೆನಾಡಿನ ಕಾಡು ಹೊಕ್ಕಿದ್ದಾರೆ ಎಂಬ ಮಾಹಿತಿ ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.