ಹೈದರಾಬಾದ್: ಪ್ರಮುಖ ಮಾವೊವಾದಿ ನಾಯಕ ರಾದ ಮತ್ತು ದಂಡಕಾರಣ್ಯ ವಿಶೇಷ ವಲಯ ಸಮಿತಿಯ ವಕ್ತಾರ ಗುಮುದವೆಲ್ಲಿ ವೆಂಕಟಕೃಷ್ಣ ಪ್ರಸಾದ್ ಅಲಿಯಾಸ್ ಗುಡ್ಸಾ ಉಸೇಂಡಿ ಪತ್ನಿ ರಾಜಿಯೊಂದಿಗೆ ಬುಧವಾರ ಹೈದರಾಬಾದ್ನ ವಿಶೇಷ ಗುಪ್ತಚರ ದಳಕ್ಕೆ ಶರಣಾಗಿದ್ದಾನೆ.
ಈ ಶರಣಾಗತಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಅನಾರೋಗ್ಯದಿಂದಾಗಿ ಆತ ಶರಣಾಗಿದ್ದಾನೆ ಎಂದು ಅನಧಿಕೃತ ಮೂಲಗಳು ಹೇಳಿವೆ. ನಕ್ಸಲ್ ಚಿಂತನೆಯಿಂದ ಭ್ರಮನಿರಸನಗೊಂಡು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕ್ಸಲ್ ಹೋರಾಟಕ್ಕೆ ಇದು ದೊಡ್ಡ ಹಿನ್ನಡೆ ಎಂದು ಶರಣಾಗತಿಯನ್ನು ಪೊಲೀಸರು ವಿಶ್ಲೇಷಿಸುತ್ತಿದ್ದಾರೆ. ಈತನ ವಿಚಾರಣೆ ನಡೆಸಲಾಗುತ್ತಿದ್ದು ಗುರುವಾರ ಬಂಧನ ಸುದ್ದಿ ಪ್ರಕಟವಾಗುವ ಸಾಧ್ಯತೆ ಇದೆ. ಇವರನ್ನು ಹಿಡಿದು ಕೊಟ್ಟವರಿಗೆ ₨ 15 ಲಕ್ಷ ನಗದು ಬಹುಮಾನ ಘೋಷಿಸಲಾಗಿತ್ತು.
53 ವರ್ಷ ವಯಸ್ಸಿನ ಉಸೇಂಡಿ ಕಳೆದ ಮೂರು ದಶಕಗಳಿಂದ ನಕ್ಸಲ್ ಹೋರಾಟದಲ್ಲಿ ತೊಡಗಿಕೊಂಡಿದ್ದನು. ಈತ ಆಂಧ್ರ ಪ್ರದೇಶದ ತೆಲಂಗಾಣ ಪ್ರಾಂತ್ಯದ ವಾರಂಗಲ್ ಜಿಲ್ಲೆಯವನು. ನಕ್ಸಲರು ಇವರನ್ನು ಬುದ್ಧಿಜೀವಿ ಮತ್ತು ಕಾರ್ಯತಂತ್ರ ನಿಪುಣ ಎಂದು ಗೌರವಿಸುತ್ತಿದ್ದರು.
ಇತ್ತೀಚೆಗೆ ಛತ್ತೀಸಗಡದ ಬಸ್ತರ್ನಲ್ಲಿ ನಕ್ಸಲರು ಕಾಂಗ್ರೆಸ್ ನಾಯಕರ ಕಾರುಗಳ ಸಾಲಿನ ಮೇಲೆ ದಾಳಿ ನಡೆಸಿ 27 ಜನರ ಸಾವಿಗೆ ಕಾರಣರಾಗಿದ್ದರು. ಈ ದಾಳಿಯನ್ನು ಈತನೇ ಸಂಘಟಿಸಿದ್ದ ಎನ್ನಲಾಗುತ್ತಿದೆ.